ವಿಷಯಕ್ಕೆ ಹೋಗಿ

ಪಶ್ಚಿಮ ಘಟ್ಟ ಶ್ರೇಣಿಯಲ್ಲೊಂದು ಬಾಗಿಲು!

 ಪಾಲಕ್ಕಾಡಿನ ಕೆಲಸದ ದಿನಗಳಲ್ಲಿ ಒಂದು ಸಂಜೆ ಕೆಲಸ ಮುಗಿದ ನಂತರ ನಾವು ಪಾಲಕ್ಕಾಡಿನ ಹೊರವಲಯದಲ್ಲಿರುವ ಒಂದು ಸಣ್ಣ ಕಲ್ಲುಗುಡ್ಡವನ್ನು ಹತ್ತಲು ಹೊರಟೆವು. ಅದು ತುಂಬಾ ಎತ್ತರವಾಗಿ ಇರಲಿಲ್ಲ. ಆದರೆ ಸಂಪೂರ್ಣ ಕಲ್ಲಿನಿಂದ ಕೂಡಿದ್ದ ಆ ಗುಡ್ಡವನ್ನು ಹತ್ತುವಾಗ ಒಂದು ವಿಚಿತ್ರ ಭಾವನೆ ಮೂಡುತ್ತಿತ್ತು. ಪಶ್ಚಿಮ ಘಟ್ಟದ ವಿಕಾಸ, ಭೂಗೋಳ, ಬೆಂಗಳೂರಿನ ಹವಾಮಾನ ಇತ್ಯಾದಿ ವಿಷಯಗಳು ಕಣ್ಣಮುಂದೆ ಬಂತು.

ಗುಡ್ಡದ ಸುತ್ತಲೂ ಕೃಷಿಭೂಮಿಗಳು ಮತ್ತು ಜನವಸತಿ ಪ್ರದೇಶಗಳಿದ್ದವು. ಆದರೆ ಮೇಲಕ್ಕೆ ಏರುತ್ತಿದ್ದಂತೆ ಆ ಗದ್ದಲಗಳಿಂದ ಕಳಚಿಕೊಂಡು ನಿಧಾನವಾಗಿ ದೂರಾದೆವು. ಸಾಕಷ್ಟು ವೇಗದಲ್ಲಿ ಬೀಸುತ್ತಿದ್ದ ಗಾಳಿಯ ಸದ್ದು ಮಾತ್ರ ಕೇಳತೊಡಗಿತು.

ಸುಮಾರು ಐದೂವರೆ ಗಂಟೆಗೆ ನಾವು ಗುಡ್ಡದ ತುದಿ ತಲುಪಿದೆವು. ಅಲ್ಲಿ ಕಂಡ ದೃಶ್ಯ ಮಾತ್ರ ಅದ್ಭುತವಾಗಿತ್ತು. ಪಶ್ಚಿಮ ಘಟ್ಟ ಶ್ರೇಣಿಯಲ್ಲೊಂದು ದೊಡ್ಡದೊಂದು ಬಾಗಿಲು ನನ್ನ ಮುಂದೆ ವಿಶಾಲವಾಗಿ ಹರಡಿಕೊಂಡಿತ್ತು. ಪಶ್ಚಿಮ ಘಟ್ಟಗಳ ಬಗ್ಗೆ ಓದಿರುವವರಿಗೆ ಪಾಲಕ್ಕಾಡು ಗ್ಯಾಪ್ ಹೊಸ ವಿಷಯವಲ್ಲ. ಆದರೆ ಅದನ್ನು ಒಂದು ಆ ಗ್ಯಾಪ್ ನ ಒಂದು ಜಾಗದಿಂದಲೇ ನೋಡುವ ಅನುಭವವೇ ಬೇರೆ.

ನಕ್ಷೆಯಲ್ಲಿ ನೋಡಿದರೆ, ಪಶ್ಚಿಮ ಘಟ್ಟ ಪರ್ವತ ಶ್ರೇಣಿ ಗೋಡೆಯಲ್ಲಿ ದೊಡ್ಡ ಖಾಲಿ ಜಾಗವೊಂದು ಕಾಣುತ್ತದೆ! ಇಡೀ ಪಶ್ಚಿಮ ಘಟ್ಟಗಳಲ್ಲಿ ಇಷ್ಟು ದೊಡ್ಡ ಗ್ಯಾಪ್ ಮತ್ತೊಂದಿಲ್ಲ. ಯಾವುದೇ ಬೆಟ್ಟ-ಗುಡ್ಡಗಳಿಲ್ಲದ ಈ ಸಮತಟ್ಟು ಪ್ರದೇಶ ಶತಮಾನಗಳಿಂದ ದಕ್ಷಿಣ ಭಾರತದ ಪಶ್ಚಿಮ ತೀರ ಮತ್ತು ಪೂರ್ವ ಭಾಗಕ್ಕೆ ಜೀವಿಸಂಕುಲ-ವಿಕಾಸಗಳಿಗೆ, ಹವಾಮಾನ-ಪರಿಸರಕ್ಕೆ, ಜನ-ಭಾಷೆ-ಸಂಸ್ಕೃತಿಗಳಿಗೆ ಕೊಂಡಿಯಾಗಿದೆ.

ಪಾಲಕ್ಕಾಡು ಗ್ಯಾಪ್‌ಗೆ ಒಂದು ಆಸಕ್ತಿದಾಯಕ ಭೂವೈಜ್ಞಾನಿಕ ಇತಿಹಾಸವಿದೆ. ಭಾರತ ಮತ್ತು ಮಡಗಾಸ್ಕರ್ ಒಮ್ಮೆ ಒಂದೇ ಭೂಭಾಗವಾಗಿದ್ದ ಕಾಲದ ನೆನಪಾಗಿ ಉಳಿದಿರುವ ರಚನೆಗಳಲ್ಲಿ ಇದೂ ಒಂದು ಎಂದು ವಿಜ್ಞಾನಿಗಳು ಪರಿಗಣಿಸುತ್ತಾರೆ. ಗುಜರಾತಿನಿಂದ ಆರಂಭವಾಗಿ ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು, ಕೇರಳಗಳ ಮೂಲಕ ಹರಡಿಕೊಂಡ ಪಶ್ಚಿಮ ಘಟ್ಟಗಳ ದೀರ್ಘ ಪರ್ವತಶ್ರೇಣಿ ಇಲ್ಲಿ ಹಠಾತ್ತನೆ ಕೊನೆಗೊಳ್ಳುತ್ತದೆ. ಯಾವುದೇ ಬೆಟ್ಟ-ಗುಡ್ಡಗಳಿಲ್ಲದ ಪಾಲಕ್ಕಾಡು ಗ್ಯಾಪ್ ಒಂದು ಕಣಿವೆಯಲ್ಲ. ಇಲ್ಲಿ ಪಶ್ಚಿಮಘಟ್ಟ ಶ್ರೇಣಿ ಇಲ್ಲವೇ ಇಲ್ಲದ ನಿರ್ವಾತ! ಇದರ ಸರಾಸರಿ ಎತ್ತರ ಸಮುದ್ರಮಟ್ಟದಿಂದ ಇದರ ಸುಮಾರು 140 ಮೀಟರ್‌ಗಳಷ್ಟಿದ್ದರೆ, ಸುಮಾರು 30 ರಿಂದ 40 ಕಿಲೋಮೀಟರ್ ಅಗಲವಿದೆ. ಈ ವಿಶಾಲವಾದ ಸಮತಟ್ಟು ನೆಲದ ನಂತರ ದಕ್ಷಿಣಕ್ಕೆ ಮತ್ತೆ ಪಶ್ಚಿಮ ಘಟ್ಟಗಳು ಆರಂಭವಾಗುತ್ತವೆ. ತಮಿಳುನಾಡಿನ ಆನಮಲೈ ಪರ್ವತಗಳ ಮೂಲಕ ಪರ್ವತ ಶ್ರೇಣಿ ಮತ್ತೆ ಮುಂದುವರೆದು, ಭಾರತ ಉಪಖಂಡದ ತುದಿಯಾದ ಕನ್ಯಾಕುಮರಿಯವರೆಗೂ ಹಬ್ಬಿದೆ.

ಪಶ್ಚಿಮ ಘಟ್ಟಗಳ ಈ ವಿಶಾಲ ಅಂತರವು ದಕ್ಷಿಣ ಭಾರತದ ಹವಾಮಾನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಹಗಲಿನಲ್ಲಿ ಸುಮಾರು 900 ಮೀಟರ್ ಎತ್ತರದಲ್ಲಿರುವ ಮೈಸೂರು ಪ್ರಸ್ಥಭೂಮಿಯ ಮೇಲೆ ನೆಲೆಸಿರುವ ಬೆಂಗಳೂರು ಪ್ರದೇಶವನ್ನು ಉಷ್ಣವಲಯದ ಸೂರ್ಯ ಬಿಸಿಮಾಡುತ್ತದೆ. ಇದರಿಂದ ಅಲ್ಲಿ ಕಡಿಮೆ ಒತ್ತಡದ ವಲಯ ಉಂಟಾಗುತ್ತದೆ. ಅರಬ್ಬೀ ಸಮುದ್ರದಿಂದ ತೇವಾಂಶ ಹೊತ್ತು ಬರುವ ಗಾಳಿಗಳು ಪಾಲಕ್ಕಾಡು ಗ್ಯಾಪ್ ಮೂಲಕ ಒಳನಾಡಿಗೆ ಪ್ರವೇಶಿಸುತ್ತವೆ. ಈ ಗಾಳಿಗಳು ಮೊದಲು ಊಟಿಯ ಸುತ್ತಮುತ್ತಲಿನ ಬೆಟ್ಟಗಳಿಗೆ ತೇವಾಂಶವನ್ನು ತಂದುಕೊಟ್ಟು, ನಂತರ ಬೆಂಗಳೂರಿನ ಕಡೆಗೆ ಸಾಗುತ್ತವೆ. ಅಲ್ಲಿ ಅವು ತಮ್ಮಲ್ಲಿರುವ ಉಳಿದ ತೇವಾಂಶವನ್ನು ಮಳೆಯ ರೂಪದಲ್ಲಿ ಸುರಿಸುತ್ತವೆ. ಈ ಸಮುದ್ರ ಮಾರುತವು ಪ್ರತಿದಿನ ಸುಮಾರು 400 ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣಿಸಿ ಬೆಂಗಳೂರನ್ನು ತಲುಪುತ್ತದೆ. ಅದಕ್ಕಾಗಿಯೇ ಬೆಂಗಳೂರಿನಲ್ಲಿ ಬಹುತೇಕ ಪ್ರತಿದಿನ ಸಂಜೆ ಅಥವಾ ರಾತ್ರಿ ವೇಳೆ ಮಳೆಯಾಗುವುದು ಅಥವಾ ವಾತಾವರಣ ತಂಪಾಗುವುದು ಸಾಮಾನ್ಯ.

ಇವೆಲ್ಲಾ ವಿಷಯಗಳನ್ನು ನಾನು ಈ ಹಿಂದೆ ಪುಸ್ತಕದಲ್ಲಿ ಓದಿದ್ದೆ. ಆದರೆ ಆ ಸಂಜೆ, ಆ ಕಲ್ಲುಗುಡ್ಡದ ಮೇಲೆ ನಿಂತು ನೋಡುತ್ತಿದ್ದಾಗ ಪುಸ್ತಕಗಳಲ್ಲಿ ಓದಿದ ಭೂಗೋಳ ಕಣ್ಣಮುಂದೆ ಜೀವಂತವಾಗಿ ನಿಂತಂತಾಯಿತು. ಇಷ್ಟು ವರ್ಷಗಳಿಂದ ನಕ್ಷೆಗಳಲ್ಲಿ ಮಾತ್ರ ನೋಡುತ್ತಿದ್ದ ಒಂದು ಸ್ಥಳ ನನ್ನ ಮುಂದೆ ಜೀವಂತವಾಗಿ ಹರಡಿಕೊಂಡಿತ್ತು. 

ಸಂಜೆಯ ಬೆಳಕು ದೃಶ್ಯವನ್ನು ಇನ್ನೂ ಸುಂದರವಾಗಿಸಿತ್ತು. ದೂರದ ಬೆಟ್ಟಗಳು ನೀಲಿ ಮತ್ತು ಬೂದು ಬಣ್ಣದ ಛಾಯೆಗಳಲ್ಲಿ ಕಾಣುತ್ತಿದ್ದವು. ಪಶ್ಚಿಮದ ಆಕಾಶದಲ್ಲಿ ಬಂಗಾರದ ಬಣ್ಣ ನಿಧಾನವಾಗಿ ಮಸುಕಾಗುತ್ತಿತ್ತು. ಅಲ್ಲೇ ಸ್ವಲ್ಪ ಹೊತ್ತು ನಿಂತು ನೋಡುತ್ತಿದ್ದೆ. ಉತ್ತರದಿಂದ ಆರಂಭವಾಗುವ ಕಲ್ಲು, ಕಾಡು ಮತ್ತು ಮೋಡಗಳಿಂದ ನಿರ್ಮಿತವಾದ ದೀರ್ಘ ಗೋಡೆ! ಪಾಲಕ್ಕಾಡಿನಲ್ಲಿ ಒಂದು ವಿರಾಮದ ನಂತರ ಮತ್ತೆ ಮುಂದುವರಿಯುವ ಪರ್ವತಶ್ರೇಣಿ! ಲಕ್ಷಾಂತರ ವರ್ಷಗಳಿಂದ ಈ ಭೂದೃಶ್ಯವನ್ನು, ಅದರ ಕಥೆಗಳನ್ನು ಮತ್ತು ಅದರ ಜೀವಿಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿರುವ ಒಂದು ಪರ್ವತಶ್ರೇಣಿ!


ಉತ್ತರದ ಗುಜರಾತ್ ನಿಂದ ಆರಂಭವಾಗುವ ಪಶ್ಚಿಮ ಘಟ್ಟ ಪರ್ವತ ಶ್ರೇಣಿ ಕೊನೆಯಾಗುವುದನ್ನು, ನಂತರ ಪೂರ್ವದ ತಮಿಳುನಾಡು, ಮತ್ತೂ ಮುಂದುವರೆದಂತೆ ದಕ್ಷಿಣದ ಭಾಗದ ದೂರದಲ್ಲಿ ಪರ್ವತ ಶ್ರೇಣಿ ಮತ್ತೆ ಆರಂಭವಾಗುವುದನ್ನೂ ಈ ದೃಶ್ಯದಲ್ಲಿ ನೋಡಬಹುದು. ಈ ಎರಡೂ ಪರ್ವತಗಳ ನಡುವೆ ಇರುವ 30-40 ಕಿಲೋಮೀಟರ್ ನಷ್ಟು ವಿಶಾಲವಾಗಿ ಹರಡಿಕೊಂಡಿರುವ ಜಾಗವೇ ಪಾಲಕ್ಕಾಡ್ ಗ್ಯಾಪ್!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...