ವಿಷಯಕ್ಕೆ ಹೋಗಿ

ಪಶ್ಚಿಮ ಘಟ್ಟಗಳ ಮಾಯಾಜಾಲ

ಪಶ್ಚಿಮಘಟ್ಟಗಳಿಗೆ ಮಾತ್ರ ಸೀಮಿತವಾದ ಶೋಲಾ ಹುಲ್ಲುಗಾವಲು 

ಕೆಲವೊಂದು ಪರಿಸರ ವ್ಯವಸ್ಥೆಗಳು ಗಮನವಿಟ್ಟು ನೋಡದೇ ಹೋದರೆ ನಮಗೆ ಅರಿವಾಗುವುದೇ ಇಲ್ಲ. ಒಂದು ದಿನ ಪಾಲಕ್ಕಾಡಿನ ಕಾಡುಗಳಲ್ಲಿ ನಡೆಯುತ್ತಿದ್ದಾಗ ಈ ಪರಿಸರ ವ್ಯವಸ್ಥೆಗಳು ಎಲ್ಲವನ್ನೂ ಒಳಗೊಳ್ಳುವ ಮಾಯಾಜಾಲ ಎಂದು ಅರಿವಾಯಿತು. ಹಾಗೆ ನಾನು ಗಮನಿಸಿದ ಎರಡು ಜಾಲಗಳಲ್ಲಿ ಒಂದು ಜಾಲ ಬಯಲಿನಲ್ಲಿದ್ದರೆ ಮತ್ತೊಂದು ಇನ್ನೊಂದು ದಟ್ಟ ಕಾಡಿನೊಳಗಿತ್ತು.

ಮೊದಲನೆಯ ಜಾಲ ಶೋಲಾ-ಹುಲ್ಲುಗಾವಲು ಪರಿಸರ ವ್ಯವಸ್ಥೆ! ಇದು ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾದ, ಎತ್ತರದ ಬೆಟ್ಟಗಳ ಮೇಲೆ ಹರಡಿಕೊಂಡಿರುವ ಹುಲ್ಲುಗಾವಲುಗಳು ಮತ್ತು ಅವುಗಳ ನಡುವೆ ಚದುರಿಕೊಂಡಿರುವ ಶೋಲಾ ಕಾಡುಗಳು!

ದೂರದಿಂದ ನೋಡಿದರೆ ಅವು ಬೆಟ್ಟಗಳ ಮೇಲಿನ ಹಸಿರು ಹೊದಿಕೆಯಂತೆ ಕಾಣುತ್ತವೆ. ಆದರೆ ಅವು ಕೇವಲ ಸುಂದರ ಭೂದೃಶ್ಯವಷ್ಟೇ ಅಲ್ಲ. ದಕ್ಷಿಣ ಭಾರತದ ಅನೇಕ ನದಿಗಳ ಹುಟ್ಟೂರು ಇದೇ. ಮಳೆ ಸುರಿದಾಗ ಈ ಹುಲ್ಲುಗಾವಲುಗಳು ನೀರನ್ನು ಹೀರಿಕೊಳ್ಳುತ್ತವೆ. ನಂತರ ಅದನ್ನು ನಿಧಾನವಾಗಿ ಮಣ್ಣಿನ ಮೂಲಕ ಹರಿಯಬಿಡುತ್ತವೆ. ಹೀಗೆ ವರ್ಷವಿಡೀ ಹೊಳೆಗಳು ಮತ್ತು ನದಿಗಳಿಗೆ ನೀರು ಒದಗಿಸುತ್ತವೆ. ಬೆಟ್ಟದ ಮೇಲಿನ ಈ ಹುಲ್ಲುಗಾವಲುಗಳು ಮತ್ತು ಶೋಲಾ ಕಾಡುಗಳು ಇಲ್ಲದಿದ್ದರೆ, ಕೆಳಗಿರುವ ಲಕ್ಷಾಂತರ ಜನರ ಬದುಕು ಬೇರೆ ರೀತಿಯದ್ದಾಗಿರುತ್ತಿತ್ತು.

ಈ ಪರಿಸರ ವ್ಯವಸ್ಥೆಯಲ್ಲಿ ಅನೇಕ ವಿಶಿಷ್ಟ ಜೀವಿಗಳು ವಾಸಿಸುತ್ತವೆ. ಪ್ರಾಣಿ, ಪಕ್ಷಿ, ಕೀಟ, ಉಭಯವಾಸಿ, ಉರಗ, ಅತಿ ಸೂಕ್ಷ ಪಾಚಿಯಂತಹ ಸಸ್ಯಗಳಿಂದ ಹಿಡಿದು ಅನೇಕ ವಿಧದ ಹುಲ್ಲ, ಮರ, ಗಿಡಗಳು. ಇನ್ನೂ ಎಷ್ಟೋ ಜೀವಿಗಳು. ಒಟ್ಟಾಗಿ ನೋಡಿದರೆ ಇದು ಒಂದು ಜಾಲದಂತೆಯೇ. ಒಂದು ಜೀವ ಇನ್ನೊಂದು ಜೀವದೊಂದಿಗೆ, ಒಂದರ ಆವಾಸ ಇನ್ನೊಂದನ್ನು ಅವಲಂಬಿಸಿ, ಹೀಗೆ ಎಲ್ಲವೂ ಪರಸ್ಪರ ಜೋಡಿಸಿಕೊಂಡಿರುವ ಒಂದು ಜಾಲ.

ಮರದಿಂದ ಮರಕ್ಕೆ ಹಬ್ಬಿದಾ ಬಳ್ಳಿ ಜಾಲ

ಎರಡನೆಯ ಜಾಲ ದಟ್ಟಕಾಡಿನ ಬೃಹದಾಕಾರದ ಬಳ್ಳಿಗಳ ಜಾಲ. ಕೆಲವೊಂದು ಕಾಡಿನಲ್ಲಿ ಎಲ್ಲೆಲ್ಲೂ ಬೃಹತ್ ಬಳ್ಳಿಗಳು ಕಾಣಿಸುತ್ತವೆ. ಕೆಲವು ಆನೆಯ ಸೊಂಡಿಲಿನಷ್ಟು ದಪ್ಪ! ಇನ್ನೂ ಕೆಲವು ಮರಗಳ ಮೇಲಿನಿಂದ ಹಗ್ಗಗಳಂತೆ ನೇತಾಡುತ್ತವೆ. ಕೆಲವು ಮರದಿಂದ ಮರಕ್ಕೆ ಸೇತುವೆಗಳಂತೆ ಚಾಚಿಕೊಂಡಿದ್ದರೆ, ಇನ್ನೂ ಕೆಲವು ಹಾವಿನಂತೆ ಸುತ್ತಿಕೊಂಡು ಮೇಲಕ್ಕೆ ಏರಿರುವ ಬಳ್ಳಿಗಳು. ಮೇಲಿಂದ ಯಾರಾದರೂ ಬಿದ್ದರೆ ನೆಲವನ್ನೇ ಮುಟ್ಟುವುದಿಲ್ಲವೇನೋ ಎಂದು ಅನಿಸುವಷ್ಟು ದಟ್ಟ. ಈ ಬಳ್ಳಿಗಳು ಕೇವಲ ಮರಗಳ ಅಪ್ಪಿ ಬೆಳೆಯುವಂತಹುದ್ದಲ್ಲ. ಅವು ಇಡೀ ಕಾಡನ್ನು ಒಟ್ಟಿಗೆ ಕಟ್ಟಿ ಹಿಡಿದಿವೆ. ಮರಗಳ ತುದಿಯಿಂದ ಹಿಡಿದು ಅಡಿಯವರೆಗೂ, ಕಾಡಿನ ನೆಲದವರೆಗೂ ಎಲ್ಲವನ್ನೂ ಜೋಡಿಸುವ ಜೀವಂತ ಹಗ್ಗಗಳಂತೆ. ಎಷ್ಟೋ ಕೀಟಗಳು, ಪಕ್ಷಿಗಳು, ಸರೀಸೃಪಗಳು, ಸಸ್ತನಿಗಳು, ಈ ಬಳ್ಳಿಗಳನ್ನೇ ತಮ್ಮ ಆವಾಸವನ್ನಾಗಿಸಿಕೊಂಡಿರುತ್ತವೆ, ಆಹಾರ ಹುಡುಕುತ್ತವೆ, ಬದುಕುತ್ತವೆ.

ಒಂದು ಬೆಟ್ಟದ ಮೇಲೆ. ಇನ್ನೊಂದು ಕಾಡಿನೊಳಗೆ. ಒಂದು ನೀರನ್ನು ಹಿಡಿದಿಟ್ಟುಕೊಂಡರೆ, ಇನ್ನೊಂದು ಕಾಡನ್ನು ಹಿಡಿದಿಟ್ಟುಕೊಳ್ಳುತ್ತದೆ. ಎರಡೂ ತಕ್ಷಣ ಗಮನಕ್ಕೆ ಬಾರದೇ ಹೋಗಬಹುದು. ಆದರೆ ಅವುಗಳ ಮೇಲೆ ನಾವು ಅವಲಂಬಿತರಾಗಿದ್ದೇವೆ. ಪಶ್ಚಿಮ ಘಟ್ಟಗಳ ಅನೇಕ ಕಥೆಗಳಂತೆ, ಈ ಜಾಲಗಳೂ ಕೂಡ ದೂರದಿಂದ ನೋಡಿದರೆ ಅರಿವಾಗುವುದಿಲ್ಲ. ಹತ್ತಿರ ಹೋಗಿ ನೋಡಿದಾಗ ಮಾತ್ರ ಅವುಗಳ ನಿಜವಾದ ರೂಪ ಅರ್ಥವಾಗುತ್ತದೆ.

ತನ್ನ ಬಾಹುಗಳಿಂದ ಮರವೊಂದನ್ನು ಗಟ್ಟಿಯಾಗಿ ಹಿಡಿದ ಬಳ್ಳಿ 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...