ವಿಷಯಕ್ಕೆ ಹೋಗಿ

ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ

 ಕೆಲವೊಮ್ಮೆ ಕಾಡಿನಲ್ಲಿ ದೊಡ್ಡ ಪ್ರಾಣಿಗಳನ್ನು ನೋಡುವಾಗ ಆಗುವಷ್ಟೇ ಖುಷಿ ಚಿಕ್ಕ ಜೀವಿಗಳನ್ನು ನೋಡುವುದರಲ್ಲೂ ಆಗುತ್ತದೆ.

ಅಂತಹ ಒಂದು ಜೀವಿ Indrella ampulla ಎನ್ನುವ ಬಸವನಹುಳು (Snail)!

ಹಲವು ವರ್ಷಗಳಿಂದ ನೋಡಬೇಕೆಂದುಕೊಂಡಿದ್ದ ಜೀವಿಗಳ ಪಟ್ಟಿಯಲ್ಲಿ ಅದೂ ಒಂದಾಗಿತ್ತು. ಆನೆ, ಹುಲಿ ಅಥವಾ ಹಾರ್ನ್‌ಬಿಲ್‌ನಷ್ಟು ಪ್ರಸಿದ್ಧವಲ್ಲದಿದ್ದರೂ, ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ಬಗ್ಗೆ ಆಸಕ್ತಿ ಇರುವವರಿಗೆ ಇದು ಒಂದು ವಿಶೇಷ ಜೀವಿ.

2025ರ ಏಪ್ರಿಲ್ ನಲ್ಲಿ ಕೊಡಗಿನಲ್ಲಿ ಸಣ್ಣ ಮಾಂಸಾಹಾರಿ ಪ್ರಾಣಿಗಳ ಬಗ್ಗೆ ಕೆಲಸ ಮಾಡುವಾಗ ಒಂದು ಕಾಫಿ ತೋಟದಲ್ಲಿ ನಾನು ಮೊದಲ ಬಾರಿಗೆ Indrella ampulla ನೋಡಿದ್ದೆ. ಒದ್ದೆಯಾದ ಕಾಡಿನ ನೆಲದ ಮೇಲೆ ನಿಧಾನವಾಗಿ ಚಲಿಸುತ್ತಿದ್ದ ಆ ಕಿತ್ತಳೆ ಬಣ್ಣದ ಬಸವನಹುಳವನ್ನು ನೋಡಿದಾಗ ಹಲವು ವರ್ಷಗಳಿಂದ ನೋಡಬೇಕೆಂದುಕೊಂಡಿದ್ದ ಜೀವಿ ಕೊನೆಗೂ ಕಣ್ಣಮುಂದೆ ಕಾಣಿಸಿಕೊಂಡಿತ್ತು.

ಕೊಡಗಿನಲ್ಲಿ ಕಂಡ ಕಿತ್ತಳೆ ಬಣ್ಣದ Indrella ampulla ಬಸವನ ಹುಳು


ಕೆಲವು ತಿಂಗಳ ನಂತರ, ಸೆಪ್ಟೆಂಬರ್ ನಲ್ಲಿ ಪಾಲಕ್ಕಾಡಿನಲ್ಲಿ ಮತ್ತೊಮ್ಮೆ Indrella ampulla ಕಾಣಿಸಿತು. ಈ ಬಾರಿ ಹಳದಿ ಬಣ್ಣದ ಹುಳು ಕಂಡಿತ್ತು. ನಂತರ ಅದರ ಬಗ್ಗೆ ಓದುತ್ತಾ ಹೋದಂತೆ ಅದು ಇನ್ನಷ್ಟು ಆಸಕ್ತಿದಾಯಕವಾಗಿ ಕಾಣತೊಡಗಿತು.

ಪಾಲಕ್ಕಾಡಿನಲ್ಲಿ ಕಂಡ ಹಳದಿ ಬಣ್ಣದ Indrella ampulla ಬಸವನ ಹುಳು

Indrella ampulla ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾದ ಜೀವಿ. ಈ ಬಸವನಹುಳುವಿನ (Snail) ಬೆನ್ನಿನ ಮೇಲೆ ಚಿಪ್ಪು ಇರುತ್ತದೆ. ಆದರೆ ಅಪಾಯ ಬಂದಾಗ ಬಸವನಹುಳುವಿನಂತೆ ಅದರ ಇಡೀ ದೇಹವನ್ನು ಚಿಪ್ಪಿನ ಒಳಗೆ ಎಳೆದುಕೊಳ್ಳಲು ಸಾಧ್ಯವಿಲ್ಲ. ಈ ಕಾರಣಕ್ಕೆ ಬಸವನ ಹುಳುವಿನ ಹತ್ತಿರದ ಸಂಬಂಧಿ, ಚಿಪ್ಪುಗಳು ಇಲ್ಲದಿರುವ ಗೊಣ್ಣೆಹುಳುವಿನೊಡನೆ (Slug) ಅದನ್ನು ಸಮೀಕರಿಸಿ ವಿಜ್ಞಾನಿಗಳು ಇದನ್ನು "ಸೆಮಿ-ಸ್ಲಗ್" ಎಂದು ಕರೆಯುತ್ತಾರೆ. 

ಇದರ ಇನ್ನೊಂದು ವಿಶೇಷತೆ ಅದರ ಬಣ್ಣ. ಈ ಪ್ರಭೇದ ಮೂರು ಪ್ರಮುಖ ಬಣ್ಣಗಳಲ್ಲಿ ಕಂಡುಬರುತ್ತದೆ: ಹಳದಿ, ಕಿತ್ತಳೆ ಮತ್ತು ಕೆಂಪು. ಕೆಲ ವರ್ಷಗಳ ಹಿಂದೆ ವಿಜ್ಞಾನಿಗಳು ಈ ಮೂರು ಬಣ್ಣಗಳ ರೂಪಗಳನ್ನು ಅಧ್ಯಯನ ಮಾಡಿದ್ದರು. ಆರಂಭದಲ್ಲಿ ಅವು ಬೇರೆ ಬೇರೆ ಪ್ರಭೇದಗಳಿರಬಹುದು ಎಂದು ಭಾವಿಸಿದ್ದರು. ಆದರೆ ನಂತರ ಅವೆಲ್ಲವೂ ಒಂದೇ ಪ್ರಭೇದಕ್ಕೆ ಸೇರಿದವು ಎಂದು ತಿಳಿಯಿತು. ಆದರೆ ಆ ಅಧ್ಯಯನದಲ್ಲಿ ಇನ್ನೊಂದು ಕುತೂಹಲಕಾರಿ ಸಂಗತಿ ಬೆಳಕಿಗೆ ಬಂತು.

ಪಶ್ಚಿಮ ಘಟ್ಟಗಳ ಅತ್ಯಂತ ಪ್ರಮುಖ ಭೌಗೋಳಿಕ ಲಕ್ಷಣಗಳಲ್ಲಿ ಒಂದಾದ ಪಾಲಕ್ಕಾಡು ಗ್ಯಾಪ್ ಈ ಜೀವಿಯ ವಿಕಾಸದ ಮೇಲೂ ತನ್ನ ಪ್ರಭಾವ ಬೀರಿದೆ. ಅಧ್ಯಯನದ ಪ್ರಕಾರ, ಕೆಂಪು ಬಣ್ಣದ ರೂಪ ಮುಖ್ಯವಾಗಿ ಪಾಲಕ್ಕಾಡು ಗ್ಯಾಪ್‌ನ ದಕ್ಷಿಣ ಭಾಗದಲ್ಲಿ ಕಂಡುಬಂದರೆ, ಹಳದಿ ಮತ್ತು ಕಿತ್ತಳೆ ಬಣ್ಣದ ರೂಪಗಳು ಉತ್ತರ ಭಾಗದಲ್ಲಿ ಕಂಡುಬರುತ್ತವೆ. ಲಕ್ಷಾಂತರ ವರ್ಷಗಳಿಂದ ಈ ವಿಶಾಲ ಗ್ಯಾಪ್ ಅವುಗಳ ನಡುವಿನ ಜೀನ್ ಹರಿವನ್ನು ನಿರ್ಬಂಧಿಸಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣಕ್ಕೆ ಪಾಲಕ್ಕಾಡು ಗ್ಯಾಪ್ ಕೇವಲ ಪರ್ವತಗಳ ಕಥೆ, ಮಾರುತಗಳ ಕಥೆ ಮತ್ತು ಮಳೆಯ ಕಥೆಯಷ್ಟೇ ಅಲ್ಲದೆ ಜೀವವಿಕಾಸದ ಕಥೆಯಲ್ಲೂ ಪಾತ್ರ ವಹಿಸಿದೆ!

ಇದರ ಮತ್ತೊಂದು ವಿಚಿತ್ರ ವಿಷಯವೆಂದರೆ, ಅಪಾಯ ಎದುರಾದಾಗ ಇದು ಬಸವನಹುಳುವಿನಂತೆ ಚಿಪ್ಪಿನೊಳಗೆ ಅಡಗಿಕೊಳ್ಳದೆ, ಬಿಳಿ ನೊರೆಯನ್ನು ಹೊರಸೂಸುತ್ತದೆ. ಮತ್ತು, ಇದು ಬೇರೆ ಬಸವನಹುಳುಗಳಂತೆ ದಪ್ಪ ಲೋಳೆಯನ್ನೂ ಹೊರಬಿಡುವುದಿಲ್ಲ.

Indrella ampulla ಹೆಚ್ಚಾಗಿ ಮಳೆಗಾಲದ ಸಮಯದಲ್ಲಿ ಅಥವಾ ಮೊದಲ ಮಳೆಯ ನಂತರ ಸಕ್ರಿಯವಾಗಿರುತ್ತದೆ. ಕೊಳೆಯುತ್ತಿರುವ ಎಲೆಗಳು, ಶಿಲೀಂಧ್ರಗಳು, ಪಾಚಿಗಳು ಮತ್ತು ಇತರ ಸಾವಯವ ಪದಾರ್ಥಗಳನ್ನು ಆಹಾರವಾಗಿ ಸೇವಿಸುತ್ತದೆ. ಈ ರೀತಿ ಕಾಡಿನ ನೆಲದಲ್ಲಿ ಪೋಷಕಾಂಶಗಳ ವಿಘಟನೆಯಲ್ಲಿ ಇಂತಹ ಜೀವಿಗಳು ಪ್ರಮುಖ ಪಾತ್ರ ವಹಿಸುತ್ತವೆ.

ನಾವು ಸಾಮಾನ್ಯವಾಗಿ ಕಾಡಿನ ಬಗ್ಗೆ ಮಾತನಾಡುವಾಗ ಹುಲಿ, ಆನೆ, ಚಿರತೆ ಅಥವಾ ಹಾರ್ನ್‌ಬಿಲ್‌ಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಪಶ್ಚಿಮ ಘಟ್ಟಗಳ ಕಥೆ ಅಷ್ಟಕ್ಕೆ ಸೀಮಿತವಲ್ಲ. ನೆಲದ ಮೇಲೆ ಬಿದ್ದ ತರಗೆಲೆಗಳ ನಡುವೆ ನಿಧಾನವಾಗಿ ಸಾಗುತ್ತಿರುವ ಒಂದು ಬಸವನಹುಳುವಿನ ಜೊತೆ ಈ ಪರ್ವತಗಳ ಲಕ್ಷಾಂತರ ವರ್ಷಗಳ ಇತಿಹಾಸ ತಳುಕು ಹಾಕಿಕೊಂಡಿದೆ.

Indrella ampulla ನಿಧಾನವಾಗಿ ಚಲಿಸುವ, ಹೆಚ್ಚು ಗಮನಕ್ಕೆ ಬಾರದ ಒಂದು ಜೀವಿ.ಆದರೆ ಅದರ ಕಥೆ ಮಾತ್ರ ಪಶ್ಚಿಮ ಘಟ್ಟಗಳಷ್ಟೇ ಹಳೆಯದು. ಕಾಡಿನಲ್ಲಿ ಇಂತಹ ಜೀವಿಗಳನ್ನು ನೋಡಿದಾಗ ಕುವೆಂಪು ಅವರ ಈ ಸಾಲುಗಳು ನೆನಪಾಗುತ್ತದೆ: "ಇಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ"

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.