ವಿಷಯಕ್ಕೆ ಹೋಗಿ

ಪಕ್ಷಿ ವೀಕ್ಷಣೆ ಮತ್ತು ಛಾಯಾಗ್ರಹಣ

 ಪಕ್ಷಿಗಳನ್ನು ಗಮನಿಸಿದರೆ, ಅವು ಯಾವಾಗಲೂ ಏನಾದರೂ ಕೆಲಸದಲ್ಲೇ ತಲ್ಲೀನವಾಗಿರುತ್ತವೆ. ಒಂದೊಮ್ಮೆ ಆಹಾರ ಹುಡುಕುತ್ತಿದ್ದರೆ, ಮತ್ತೊಮ್ಮೆ ಗೂಡು ಕಟ್ಟುತ್ತಿರುತ್ತವೆ, ಇಲ್ಲವೇ ಮರಿಗಳಿಗೆ ಆಹಾರ ತಿನ್ನಿಸುತ್ತಿರುತ್ತವೆ. ಕೆಲವೊಮ್ಮೆ ತಮ್ಮ ಕೆಲಸದಲ್ಲಿ ಅಷ್ಟು ಮಗ್ನವಾಗಿಬಿಡುತ್ತವೆ, ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನೇ ಮರೆತುಬಿಡುತ್ತವೆ.

ಕ್ಯಾಸಲ್ ರಾಕ್ ಹತ್ತಿರ ಇವೋಲಿ ಎಂಬ ಪುಟ್ಟ ಊರಿನ ಬಳಿ ಒಂದು ಸಣ್ಣ ಹೊಳೆಯಿದೆ. ಒಂದು ದಿನ ನಾನು ಜೀಪಿನಲ್ಲಿ ಆ ಹೊಳೆಯನ್ನು ದಾಟುತ್ತಿದ್ದೆ. ಸಾಮಾನ್ಯವಾಗಿ ಹೊಳೆ ಅಥವಾ ನದಿಯ ಹತ್ತಿರ ಯಾವುದಾದರೂ ಪಕ್ಷಿ ಅಥವಾ ಪ್ರಾಣಿ ಕಾಣಬಹುದು ಎಂಬ ಅನುಭವವಿರುವುದರಿಂದ, ಅಂತಹ ಜಾಗಗಳಲ್ಲಿ ನಾನು ಯಾವಾಗಲೂ ನಿಧಾನವಾಗಿಯೇ ಜೀಪ್ ಓಡಿಸುತ್ತೇನೆ. ಬಹಳ ಬಾರಿ ಆ ಅಭ್ಯಾಸಕ್ಕೆ ಪ್ರತಿಫಲವೂ ಸಿಕ್ಕಿದೆ.

ಆ ದಿನವೂ ಹೊಳೆಯ ಹತ್ತಿರ ಬಂದ ತಕ್ಷಣ ಜೀಪಿನ ವೇಗ ಕಡಿಮೆ ಮಾಡಿದೆ. ಹೊಳೆಯ ಮಧ್ಯದಲ್ಲಿದ್ದ ಒಂದು ಕಲ್ಲಿನ ಮೇಲೆ ಮಿಂಚುಳ್ಳಿ (Common Kingfisher) ಕುಳಿತಿತ್ತು. ಅದರ ದೃಷ್ಟಿಯೆಲ್ಲ ನೀರಿನ ಮೇಲೆಯೇ ಇತ್ತು. ಯಾವುದೋ ಮೀನು ಹತ್ತಿರ ಬರಬಹುದೆಂಬ ನಿರೀಕ್ಷೆಯಲ್ಲಿ ಸಂಪೂರ್ಣ ಏಕಾಗ್ರತೆಯಿಂದ ಹೊಂಚು ಹಾಕಿ ಕುಳಿತಿತ್ತು.

ನಾನು ಜೀಪನ್ನು ನಿಲ್ಲಿಸಿದೆ. ಕೆಲವು ಕ್ಷಣಗಳ ನಂತರ ನಿಧಾನವಾಗಿ ಇನ್ನೂ ಹತ್ತಿರ ಕೊಂಡೊಯ್ದೆ. ಆಗಲೂ ಅದು ಹಾರಲಿಲ್ಲ. ನನ್ನ ಜೀಪಿನ ಕಡೆ ಒಮ್ಮೆ ಕೂಡ ನೋಡಲಿಲ್ಲ. "ಇನ್ನೂ ಸ್ವಲ್ಪ ಹತ್ತಿರ ಹೋಗಿ ನೋಡೋಣ," ಎಂದು ಜೀಪನ್ನು ಮೆಲ್ಲನೆ ನೀರಿನೊಳಗೆ ಇಳಿಸಿದೆ.

ಅಷ್ಟರಲ್ಲಿ ಮಿಂಚುಳ್ಳಿಗೆ ಏನನ್ನಿಸಿತೋ ಗೊತ್ತಿಲ್ಲ. ಥಟ್ಟನೆ ಹಾರಿ ಬಂದು ನನ್ನ ಜೀಪಿನ ಬಾನೆಟ್ ಮೇಲೆಯೇ ಕುಳಿತುಕೊಂಡಿತು!

ನನ್ನಿಂದ ಕೇವಲ ಮೂರು ಅಡಿ ದೂರದಲ್ಲಿ ಅದು ಕುಳಿತಿತ್ತು. ನಾನು ಅದನ್ನೇ ನೋಡುತ್ತಿದ್ದೆ. ಅದು ಮಾತ್ರ ನನ್ನ ಇರುವಿಕೆಯನ್ನೇ ಮರೆತು ನೀರನ್ನೇ ನೋಡುತ್ತಿತ್ತು. ಸುಮಾರು ಒಂದು ನಿಮಿಷ ಹಾಗೆಯೇ ಕಳೆದುಹೋಯಿತು. ಅಷ್ಟು ಹತ್ತಿರದಿಂದ ಆ ಪುಟ್ಟ ಪಕ್ಷಿಯನ್ನು ಸೂಕ್ಷ್ಮವಾಗಿ ನೋಡುವ ಅವಕಾಶ ಜೀವನದಲ್ಲಿ ಬಹಳ ಅಪರೂಪ.

ಕೊನೆಗೆ, "ಒಂದು ಚಿತ್ರವಾದರೂ ತೆಗೆದುಕೊಳ್ಳೋಣ," ಎಂದು ಮೆಲ್ಲಗೆ ನನ್ನ ಕಾಲಿನ ಬಳಿಯಿದ್ದ ಕ್ಯಾಮೆರಾದ ಕಡೆ ಕೈ ಚಾಚಿದೆ. ನನ್ನ ಆ ಸಣ್ಣ ಚಲನೆಯೇ ಸಾಕಾಯಿತು. ಮಿಂಚುಳ್ಳಿ ಕ್ಷಣಾರ್ಧದಲ್ಲಿ ಎಚ್ಚರಗೊಂಡಿತು. ಒಮ್ಮೆ ನನ್ನ ಕಡೆ ತಿರುಗಿ ನೋಡಿತು. ಆಗ ಬಹುಶಃ ತಾನು ಎಲ್ಲಿದ್ದೇನೆಂಬ ಅರಿವು ಅದಕ್ಕೆ ಆಗಿರಬೇಕು. ಮರುಕ್ಷಣವೇ ರೆಕ್ಕೆ ಬಡಿದು ಹಾರಿಹೋಯಿತು.

ಆ ದಿನ ಕ್ಯಾಮೆರಾ ನನ್ನ ಕೈಯಲ್ಲೇ ಇತ್ತು. ಆದರೂ ಒಂದು ಚಿತ್ರವೂ ತೆಗೆಯಲಾಗಲಿಲ್ಲ. ಆದರೆ ಈಗ ಅನಿಸುತ್ತದೆ—ತಕ್ಷಣಕ್ಕೆ ಕ್ಯಾಮೆರಾ ಸಿಕ್ಕಿದ್ದರೂ ಒಂದು ಒಳ್ಳೆ Photo ತೆಗೆಯುತ್ತಿದ್ದೆ ಎಂದು ಹೇಳಲಾರೆ. ಕೆಲವು ಕ್ಷಣಗಳು ಕ್ಯಾಮೆರಾದಲ್ಲಿ ಬಂಧಿಯಾಗಿಸುವುದಕ್ಕಿಂತ, ಸುಮ್ಮನೆ ಅನುಭವಿಸಬೇಕಷ್ಟೇ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಚಿತ್ರ: © ಶ್ರೀಕಾಂತ ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. ಚಿತ್ರ: © ಶ್ರೀಕಾಂತ Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

 ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ್ರ...