ವಿಷಯಕ್ಕೆ ಹೋಗಿ

ಕೋಲು ಜೇನು (ರೆಡ್ ಡ್ವಾರ್ಫ್ ಹನಿ ಬೀ)

ನಮಗೆ ಜೇನ್ದುಂಬಿಗಳು ಎಂದರೆ ಸ್ವಲ್ಪ ಹೆದರಿಕೆ ಇದ್ದೆ ಇರುತ್ತದೆ. ಒಮ್ಮೆಲೆ ಇವು ದಾಳಿ ನಡೆಸಿದರೆ ಒಮ್ಮೊಮ್ಮೆ ಜೀವಕ್ಕೆ ಅಪಾಯ ವಾಗಬಹುದು. ಆದರೆ ಎಲ್ಲ ಜೇನ್ದುಂಬಿಗಳು ಅಷ್ಟು ಅಪಾಯಕಾರಿ ಆಗಿರುವುದಿಲ್ಲ. ಅಂತಹ ಒಂದು ಜೇನ್ದುಂಬಿಯೆ ಕೋಲು ಜೇನು.
ಕೋಲು ಜೇನ್ದುಂಬಿ

ಕೆಲವು ವರ್ಷಗಳ ಹಿಂದೆ ನನ್ನ ರೂಮಿನ ಬಾಲ್ಕನಿಯಲ್ಲಿ ನೆಲದಿಂದ ಸುಮಾರು ಎರಡು ಅಡಿ ಎತ್ತರದಲ್ಲಿ ಗೋಡೆಯ ಮೇಲೆ ದೀರ್ಘಗೋಲಾಕಾರದಲ್ಲಿ ಜೇನ್ದುಂಬಿಗಳು ಇರುವುದು ಕಂಡುಬಂತು. ನೋಡಲು ಇವು ಚಿಕ್ಕಗಾತ್ರದಲ್ಲಿ ಇದ್ದುದ್ದರಿಂದ, ಹೆಜ್ಜೇನಂತು ಅಲ್ಲ ಹಾಗೆ ಬಿಟ್ಟರೆ ಅದರ ಚಲನವಲನಗಳನ್ನು ನೋಡಬಹುದು ಎಂದುಕೊಂಡೆ‌. ಏನು ತೊಂದರೆ ನೀಡದೆ ಇವು ಅಲ್ಲಿ ಅನೇಕ ದಿನಗಳು ಇದ್ದವು. ಇವು ಕೋಲುಜೇನು ಅಥವಾ ರೆಡ್ ಡ್ವಾರ್ಫ್ ಹನಿ ಬೀ ಎಂದು ತಿಳಿಯಿತು.

ಇದರ ವೈಜ್ಞಾನಿಕ ಹೆಸರು ಏಪಿಸ್ ಫ್ಲೋರಿಯ(Apis florea). ಇವು ಭಾರತ ಸೇರಿದಂತೆ ಆಫ್ರಿಕಾ ಮತ್ತು ಏಷ್ಯಾ ಖಂಡದ ದೇಶಗಳಲ್ಲಿ ಕಾಣಸಿಗುತ್ತವೆ. ಅದರಲ್ಲು ಆಗ್ನೇಯ ಏಷ್ಯಾದಲ್ಲಿ ಇವು ಸಾಮಾನ್ಯ. ಇವು ಹೈಮೆನಾಪ್ಟೆರ ವ್ಯವಸ್ಥೆಯಲ್ಲಿ ಏಪಿಡೆ ಕುಟುಂಬ ಮತ್ತು ಎಪಿಸ್ ಕುಲದಡಿ ವರ್ಗೀಕರಿಸಲಾಗಿದೆ.
ಗೋಡೆಯ ಮೇಲೆ ದೀರ್ಘಗೋಲಾಕಾರದ ಗೂಡು
ಕೋಲು ಜೇನು ಉನ್ನತಮಟ್ಟದ ಸಾಮಾಜಿಕ ದುಂಬಿಗಳು. ಪ್ರಪಂಚದಲ್ಲಿ ಇದುವರೆಗೆ ಗುರುತಿಸಲಾಗಿರುವ ಹತ್ತು ಜೇನ್ದುಂಬಿಗಳಲ್ಲಿ ಇದು ಸಹ ಒಂದು. ಇದರ ಗೂಡಿನಲ್ಲಿ ರಾಣಿ, ಗಂಡುಗಳು ಮತು ಹೆಣ್ಣು ಕೆಲಸಗಾರ ದುಂಬಿಗಳು ಇರುತ್ತವೆ. ರಾಣಿ ಮತ್ತು ಗಂಡುಗಳು ಸಂತಾನೋತ್ಪತ್ತಿ ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ. ಹೆಣ್ಣು ಕೆಲಸಗಾರ ದುಂಬಿಗಳು ಸಂತಾನೋತ್ಪತ್ತಿ ಮಾಡುವುದಿಲ್ಲ ಮತ್ತು ಗೂಡಿನ ನಿರ್ವಹಣೆ ಮತ್ತು ಆಹಾರವನ್ನು ಸಂಗ್ರಹಿಸುವ ಕಾರ್ಯ ನಿರ್ವಹಿಸುತ್ತದೆ. ಇವೆಲ್ಲ ಪರಸ್ಪರ ಅವಲಂಬಿತವಾಗಿರುವುದರಿಂದ ಒಂದನ್ನೊಂದು ಬಿಟ್ಟು ಬದುಕಿರಲಾರವು.

ಕೋಲು ಜೇನು ಚಿಕ್ಕಗಾತ್ರದ ಜೇನ್ದುಂಬಿಗಳು. ಕೆಲಸಗಾರ ದುಂಬಿಗಳು ಸುಮಾರು 7-10 ಮಿಮೀನಷ್ಟು ಉದ್ದವಿರುತ್ತದೆ. ಇದರ ಪ್ರಧಾನ ಬಣ್ಣವೆಂದರೆ ಕೆಂಗಂದು. ಇದರ ನಡು ಭಾಗ ಕೆಂಗಂದು ಬಣ್ಣದಲ್ಲಿ ಶುರುವಾಗಿ ಬಿಳಿ ಪಟ್ಟೆಗಳೊಡನೆ ಕಪ್ಪು ಬಣ್ಣದಲ್ಲಿ ಕೊನೆಗೊಳ್ಳುತ್ತದೆ. ಮಧ್ಯ ಭಾಗ ಕಪ್ಪು ಬಣ್ಣದಿಂದ ಕೂಡಿದ್ದು ಚಿಕ್ಕದಾದ ಬಿಳಿಯ ರೋಮಗಳು ಇರುತ್ತವೆ. ಚಿಕ್ಕ ದಾದ ಸೊಂಡಿ ಮಧುವನ್ನು ಹೀರಲು ಸಹಾಯ ಮಾಡುತ್ತದೆ. ರಾಣಿ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಗಂಡು ದುಂಬಿ ಸಂಪೂರ್ಣವಾಗಿ ಕಪ್ಪಗಿರುತ್ತದೆ.

ಈ ದುಂಬಿಗಳು ತಮ್ಮ ಗೂಡನ್ನು ಪೊದೆ ಅಥವಾ ಕಡಿಮೆ ಎತ್ತರದ ಕೊಂಬೆಗಳಲ್ಲಿ ಮತ್ತು ಎಲೆಗಳಿಂದ ಆವೃತವಾದ ನೆರಳಿನ ಜಾಗಗಳಲ್ಲಿ ಕಟ್ಟಿಕೊಳ್ಳುತ್ತವೆ. ಇದರ ಗೂಡು ಒಂಟಿ ಹುಟ್ಟಿನಿಂದ ಕೂಡಿರುತ್ತದೆ.

ಈ ದುಂಬಿಗಳು ವಿಷೇಶತೆ ಎಂದರೆ ಇವು ತಮ್ಮ ಸಂಗಡಿಗರಿಗೆ ಅಹಾರದ ಲಭ್ಯತೆ ಬಗ್ಗೆ ತಿಳಿಸುವ ಬಗೆ. ಇದಕ್ಕಾಗಿ ಇವು ಒಂದು ರೀತಿಯ ನರ್ತನ ಮಾಡುತ್ತದೆ. ಇದರಿಂದ ಇತರ ದುಂಬಿಗಳಿಗೆ ಅಹಾರ ಇರುವ ಜಾಗದ ದೂರ ಮತ್ತು ದಿಕ್ಕು ತಿಳಿಯುತ್ತದೆ. ಇವುಗಳು ಲಾರ್ವ ಹಂತದಲ್ಲಿ ಪಡೆಯುವ ಆಹಾರದ ಮೇಲೆ ಇವುಗಳ ಲಿಂಗ ನಿರ್ಧರಿತವಾಗುತ್ತದೆ. ಕಡಿಮೆ ಪೌಷ್ಟಿಕಾಹಾರ ಗಳಿಸಿಕೊಳ್ಳುವ ಲಾರ್ವಗಳು ಮುಂದೆ ಕೆಲಸಗಾರ ದುಂಬಿಗಳಾಗಿ ಬೆಳೆಯುತ್ತವೆ.

ಈ ದುಂಬಿಗಳು ಸೌಮ್ಯ ಸ್ವಭಾವದವಾದರು ಇವುಗಳನ್ನು ಸಾಕುವುದು ತುಂಬಾ ಅಪರೂಪ. ಇವುಗಳ ಜೇನು ಸಂಗ್ರಹಿಕೆ ಕಡಿಮೆ ಇರುವುದೆ ಇದಕ್ಕೆ ಕಾರಣ.

ಮೊನ್ನೆ ಚಳಿಗಾಲದಲ್ಲಿ ಮನೆಯ ಮುಂದಿರುವ ಹೊಂಗೆ ಮರ ತನ್ನ ಎಲೆಗಳನ್ನ ಉದುರಿಸಿದಾಗ ಆಶ್ಚರ್ಯವೊಂದು ಕಾದಿತ್ತು. ಮರದ ಕೊಂಬೆಯೊಂದರಲ್ಲಿ ಕೋಲು ಜೇನು ಗೂಡನ್ನ ಕಟ್ಟಿಕೊಂಡಿರುವುದು ಕಂಡುಬಂತು. ಎಲೆಗಳ ಮಧ್ಯೆ ಈ ಗೂಡು ಅಷ್ಟು ಸುಲಭವಾಗಿ ಕಾಣಿಸುವುದಿಲ್ಲ. ಏನು ತೊಂದರೆ ಕೊಡದ ಕೋಲು ಜೇನು ಗೂಡು ಕಂಡುಬಂದರೆ ಅದನ್ನ ಕೀಳಿಸದೆ ಹಾಗೆ ಬಿಡುವುದು ಒಳಿತು. ಇವು ಪರಾಗಸ್ಪರ್ಶದಿಂದ ನಮಗೆ ಮಾಡುವ ಸಹಾಯ ಅಪಾರ

ಕೊಂಬೆಯೊಂದರಲ್ಲಿ ಕೋಲು ಜೇನು ಗೂಡು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...