ವಿಷಯಕ್ಕೆ ಹೋಗಿ

ಹಂತಕ


ಮಾನವ ತನ್ನ ಬುದ್ಧಿಮತ್ತೆಯಿಂದ ಪ್ರಕೃತಿಯ ಮೇಲೆ ಒಂದು ರೀತಿಯ ಹಿಡಿತ ಸಾಧಿಸಿದ್ದಾನೆ. ಆದರೆ ಪ್ರಕೃತಿಯನ್ನು ಸಂಪೂರ್ಣವಾಗಿ ಗೆಲ್ಲಲಾಗಿಲ್ಲ. ಮಾನವ ಪ್ರಕೃತಿಯನ್ನು ಎಷ್ಟೇ ದಮನ ಮಾಡಲು ಯತ್ನಿಸಿದರು ಅದು ಮತ್ತೆ ಎದ್ದು ನಿಲ್ಲುತ್ತದೆ. ನಾವು ಸಹಜವಾಗಿ ನಮ್ಮ ಸುತ್ತಲಿನ ಪರಿಸರದಲ್ಲಿ ಏನನ್ನಾದರು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುತ್ತಿರುತ್ತೇವೆ. ಮೇಲ್ನೋಟಕ್ಕೆ ಇದು ಆ ಪರಿಸರದಲ್ಲಿನ ಜೀವಿಗಳಿಗೆ ಮಾರಕವಾಗಿ ಕಂಡುಬಂದರು, ಕಾಲ ಕಳೆದಂತೆ ಆ ಬದಲಾವಣೆಗೆ ಹೊಂದಿಕೊಳ್ಳಲು ಜೀವಿಗಳು ಯತ್ನಿಸುತ್ತವೆ ಮತ್ತು ಬಹುತೇಕ ಯಶಸ್ವಿಯಾಗುತ್ತವೆ.


ಇದನ್ನೆಲ್ಲ ಏಕೆ ಇಲ್ಲಿ ಬರೆದೆನೆಂದರೆ, ನಾವು ಮಾಡಿದ ಒಂದು ಚಿಕ್ಕ ಬದಲಾವಣೆಯಿಂದ ಒಂದು ಕೀಟದ ಪರಿಚಯವಾಗಿದ್ದಕ್ಕೆ. ನಾನು ತಂದು ನೆಟ್ಟಿದ್ದ ಪಾರಿಜಾತ ಗಿಡ ಎರಡು ಮೂರು ವರ್ಷಗಳಲ್ಲಿ ದೊಡ್ಡದಾಗಿ ಬೆಳೆದು ಅದರ ಕೊಂಬೆಗಳೆಲ್ಲ ದಾರಿಗೆ ಅಡ್ಡವಾಗಿ ಹಬ್ಬಿದ್ದವು. ಇದಕ್ಕಾಗಿ ನನ್ನ ತಂದೆ ಒಂದು ಟ್ವೈನ್ ದಾರದಿಂದ ಕೊಂಬೆಗಳನೆಲ್ಲ ಬಿಗಿದು ದಾರದ ಇನ್ನೊಂದು ತುದಿಯನ್ನು ಒಂದು ಕಂಬಕ್ಕೆ ಕಟ್ಟಿದ್ದರು. ಇದರ ಮಾರನೆ ದಿನ ಆ ಕಿರು ತೋಟಕ್ಕೆ ಹೋದಾಗ ದಾರದ ಮೇಲೆ ಏನೋ ಗಂಟಿನ ರೀತಿ ದೂರದಿಂದ ಕಾಣಿಸಿತು. ಕುತೂಹಲದಿಂದ ಹತ್ತಿರದಿಂದ ಪರೀಕ್ಷಿಸೋಣವೆಂದು ಹೋದೆ. ಆಶ್ಚರ್ಯವೆಂದರೆ ಅದೊಂದು ಕೀಟವಾಗಿತ್ತು. ದಾರದ ಬಣ್ಣ ಮತ್ತು ಕೀಟದ ಬಣ್ಣ ಒಂದೇ ಆದ್ದರಿಂದ ದೂರದಿಂದ ನನಗೆ ಅದನ್ನು ಗ್ರಹಿಸಲು ಸಾಧ್ಯವಾಗಲಿಲ್ಲ. ಅದಕ್ಕಿಂತ ಆಶ್ಚರ್ಯವಾಗಿದ್ದು ನಾನು ಆ ಕೀಟವನ್ನು ನೋಡುತ್ತಿದಿದ್ದು ಅದೇ ಮೊದಲ ಬಾರಿಯಾಗಿತ್ತು. ನೋಡಲು ಸ್ವಲ್ಪ ವಿಚಿತ್ರವಾಗಿದ್ದ ಆ ಕೀಟ ಯಾವುದೆಂದು ತಿಳಿಯಲಿಲ್ಲ. ಇರಲಿ ಎಂದು ಒಂದೆರಡು ಫೋಟೊ ಕ್ಲಿಕ್ಕಿಸಿ ಇಟ್ಟುಕೊಂಡೆ.

ಇದಾದ ನಂತರ ಇದರ ಬಗ್ಗೆ ನನಗೆ ಸಂಪೂರ್ಣವಾಗಿ ಮರೆತೇಹೋಯ್ತು. ಅಲ್ಲದೆ ಕೀಟಗಳನ್ನು ಪತ್ತೆ ಮಾಡುವುದು ಅಷ್ಟು ಸುಲಭವಲ್ಲ ಏಕೆಂದರೆ ಅದರ ಬಗ್ಗೆ ಮಾಹಿತಿ ತುಂಬಾ ವಿರಳ. ಇತ್ತೀಚೆಗೆ ಆಕಸ್ಮಿಕವಾಗಿ ಈ ಕೀಟದ ಬಗ್ಗೆ ಮಾಹಿತಿ ಸಿಕ್ಕಿತು. ಓದುತ್ತ ಈ ಕೀಟದ ಕುತುಹಲಕಾರಿ ಅಂಶಗಳು ತಿಳಿದು ಬಂತು.

ಈ ಕೀಟಕ್ಕೆ ಇಂಗ್ಲಿಷ್ ನಲ್ಲಿ ಅಸಾಸಿನ್ ಬಗ್ ಎಂದು ಕರೆಯುತ್ತಾರೆ. ಕನ್ನಡದಲ್ಲಿ ನಾವು ಹಂತಕ ಕೀಟ ಎಂದು ಕರೆಯಬಹುದು. ಹಂತಕ ಕೀಟ ರೆಡುವೀಡೆ ಕುಟುಂಬಕ್ಕೆ ಸೇರುತ್ತದೆ. ಈ ಕುಟುಂಬದ ಬಹುತೇಕ ಸದಸ್ಯರು ಬೇಟೆಗಾರರು. ಆದರೆ ಕೆಲವು ರಕ್ತವನ್ನು ಹೀರಿ ಕುಡಿಯುವ ಕೀಟಗಳು ಇವೆ.

ಹಂತಕ ನೋಡಲು ಸ್ವಲ್ಪ ವಿಚಿತ್ರವಾಗಿರುತ್ತದೆ. ಇವು ಸಾಮಾನ್ಯವಾಗಿ ಕೆಂಪು, ಕಂದು ಮತ್ತು ಕಪ್ಪು ಬಣ್ಣದಲ್ಲಿ ಇರುತ್ತವೆ. ಇವುಗಳಿಗೆ ತಲೆ ಉದ್ದಕ್ಕಿದ್ದು ಕತ್ತಿನ ಭಾಗ ಕಿರಿದಾಗಿರುತ್ತದೆ. ಕಾಲುಗಳು ಉದ್ದಕ್ಕಿರುತ್ತವೆ. ಇದರ ಪ್ರಮುಖ ಆಕರ್ಷಣೆಯೆಂದರೆ ಅದು ಸೊಂಡಿ. ಈ ಸೊಂಡಿಯನ್ನು ತನ್ನ ಮಧ್ಯಭಾಗದಲ್ಲಿರುವ ತೋಡಿನಲ್ಲಿ ಇರಿಸಿಕೊಂಡಿರುತ್ತದೆ. ಇದೇ ಸೊಂಡಿಯನ್ನು ತೋಡಿನಲ್ಲಿರುವ ಏಣುಗಳನ್ನು ಉಜ್ಜಿ ಶಬ್ದವನ್ನು ಮಾಡುತ್ತವೆ. ಸೊಂಡಿಯ ಪ್ರಮುಖ ಉಪಯೋಗವೆಂದರೆ ಬೇಟೆ ಪ್ರಾಣಿಯನ್ನು ಸಾಯಿಸುವುದರಲ್ಲಿ. ಸೊಂಡಿಯ ಮೂಲಕ ಬೇಟೆ ಪ್ರಾಣಿಯ ದೇಹಕ್ಕೆ ವಿಷಮಯ ದ್ರವವನ್ನು ಸೇರಿಸುತ್ತದೆ. ಈ ವಿಷ ಬೇಟೆಯನ್ನು ಸಾಯಿಸುವುದಲ್ಲದೆ ಬೇಟೆ ಪ್ರಾಣಿಯ ದೇಹದ ಒಳ ಭಾಗವನ್ನು ದ್ರವೀಕರಿಸಿ ಹಂತಕ ಕೀಟಕ್ಕೆ ಹೀರಲು ಅನುಕೂಲ ಮಾಡಿಕೊಡುತ್ತದೆ. ಹಂತಕ ಕೀಟ ತನ್ನ ವಿಷದಿಂದ ತನಗಿಂತ ದೊಡ್ಜದಾದ ಪ್ರಾಣಿಗಳನ್ನು ಬೇಟೆಯಾಡಬಹುದು.
ಹಂತಕ ಕೀಟದ ಕಾಲುಗಳಲ್ಲಿ ಸಣ್ಣ ಕೂದಲುಗಳು ಇರುತ್ತವೆ. ಇದು ತನ್ನ ಬೇಟೆಯನ್ನು ಭದ್ರವಾಗಿ ಹಿಡಿದುಕೊಳ್ಳಲು ಸಹಾಯ ಮಾಡುತ್ತದೆ. ಈ ಕೀಟಕ್ಕೇನಾದರು ಶತ್ರುಗಳು ಎದುರಾದರೆ, ಮೊದಲು ತನ್ನ ಸೊಂಡಿಯ ಸಹಾಯದಿಂದ ಕರ್ಕಶವಾದ ಶಬ್ದವನ್ನು ಹೊಮ್ಮಿಸುತ್ತದೆ. ಅದಕ್ಕೂ ಶತ್ರು ಬಗ್ಗಲಿಲ್ಲವೆಂದರೆ ತನ್ನ ಸೊಂಡಿಯಿಂದ ಚುಚ್ಚಿ ತಪ್ಪಿಸಿಕೊಳ್ಳುತ್ತದೆ.
ನಿಮಗೇನಾದರು ಹಂತಕ ಕೀಟ ಕಂಡರೆ ಅದನ್ನು ಕೈಯಿಂದ ಮುಟ್ಟಬೇಡಿ. ಅದರ ಕಡಿತ ನೋವಿನಿಂದ ಕೂಡಿರುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...