ವಿಷಯಕ್ಕೆ ಹೋಗಿ

ಉಗುಳು ಕೀಟ

ಪ್ರಕೃತಿಯಲ್ಲಿ ಓಡಾಡುವುದು ನೆನೆಸಿಕೊಂಡರೆ ಸಂತಸವಾದರು, ಒಮ್ಮೊಮ್ಮೆ ಓಡಾಡುವಾಗ ಯಾಕಾದರು ಬಂದೆವೊ ಎಂದೆನಿಸಿಬಿಡುತ್ತದೆ. ಇದಕ್ಕೆ ಕಾರಣ ಪ್ರಕೃತಿ ಒಡ್ಡುವ ಕಷ್ಟಗಳು. ಆದರೆ ಮತ್ತೆ ಪ್ರಕೃತಿಯಲ್ಲಿ ಓಡಾಡಬೇಕೆಂಬ ಹಂಬಲ ಉಂಟಾಗಲು ಕಾರಣ ಪ್ರಕೃತಿ ನೀಡುವ ಅಚ್ಚರಿಗಳು. ಒಮ್ಮೆ ಹೀಗೆ ಒಂದು ಅಚ್ಚರಿಯಾಯಿತು.


ಪಕ್ಷಿಯನ್ನೊ, ಚಿಟ್ಟೆಯನ್ನೊ ಅರಸುತ್ತ ಸಾಗುತ್ತಿದ್ದ ನನಗೆ, ಒಂದು ಗಿಡದ ಮೇಲೆ ಬಿಳಿ ಬಣ್ಣದ ಎಂತದ್ದೊ ನೊರೆ ಕಂಡುಬಂತು. ನಮ್ಮ ದೇಶದಲ್ಲಿ ಸಿಕ್ಕ ಸಿಕ್ಕಲೆಲ್ಲ ಉಗಿಯುವುದು ಸರ್ವೇ ಸಾಮಾನ್ಯವಾದ್ದರಿಂದ, ಇದು ಅಂತದ್ದೆ ಕೆಲಸವೆಂದು ಅದನ್ನು ಅಲಕ್ಷಿಸಿ ಮುನ್ನಡೆದೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಮತ್ತೊಮ್ಮೆ ಇದೇ ತರಹದ ನೊರೆ ಕಂಡುಬಂತು ಈಗ ಅದರ ಬಗ್ಗೆ ಕುತೂಹಲ ಮೂಡಲಾರಂಭಿಸಿತಾದರು, ಹೆಚ್ಚು ತಲೆಕೆಡಿಸಿಕೊಳ್ಳದೆ ಮುಂದುವರೆದೆ. ಇನ್ನೊಮ್ಮೆ ಇದು ಕಂಡುಬಂದಾಗ, ಇದು ಖಂಡಿತ ಮನುಷ್ಯನ ಕೆಲಸವಲ್ಲ ಎಂದು ಖಾತರಿಯಾಯಿತು. ಕುತೂಹಲ ತಾಳಲಾರದೆ ಅಲ್ಲೇ ಬಿದ್ದಿದ್ದ ಕಡ್ಡಿಯಿಂದ ನೊರೆಯನ್ನು ಸರಿಸಿ ನೋಡಿದಾಗಲೆ ನನಗೆ ಅಚ್ಚರಿಯಾಗಿದ್ದು. ಏಕೆಂದರೆ ಆ ನೊರೆಯನ್ನು ಸೂಸುತ್ತಿದ್ದ ಜೀವಿ ಒಂದು ಕೀಟವಾಗಿತ್ತು.


ಈ ಕೀಟಕ್ಕೆ ಇಂಗ್ಲೀಷಿನಲ್ಲಿ Spittlebug ಅಥವಾ Froghopper ಎನ್ನುತ್ತಾರೆ. ಇದು Cercopidae ಎನ್ನುವ ಕುಟುಂಬ ವರ್ಗಕ್ಕೆ ಸೇರುತ್ತದೆ. ಈ ಕುಟುಂಬ ಸದಸ್ಯರ ವಿಶೇಷವೇನೆಂದರೆ ತಮ್ಮ ಚಿಕ್ಕ ವಯಸ್ಸಿನಲ್ಲಿ (Nymph stage) ತಮ್ಮ ಸುತ್ತಲು ನೊರೆಯ ಹೊದಿಕೆಯನ್ನು ಮಾಡಿಕೊಳ್ಳುವುದು. ಈ ನೊರೆಯನ್ನು ಕೀಟ ಸ್ವತಃ ಉತ್ಪಾದಿಸುವುದಿಲ್ಲ ಬದಲಿಗೆ ಗಿಡದ ರಸವನ್ನು ಈ ರೀತಿ ನೊರೆಯಾಗಿ ಪರಿವರ್ತಿಸುತ್ತದೆ.

ನೊರೆಯ ಹೊದಿಕೆಯಿಂದ, ಅನೇಕ ಪ್ರಯೋಜನವುಂಟು. ಇದು ಶತ್ರುಗಳಿಂದ ಅಡಗಿಕೊಳ್ಳಲು ಸಹಾಯ ಮಾಡುತ್ತದೆ. ಇದರ ರುಚಿ ಅಸಹನೀಯವಾದ್ದರಿಂದ ಶತ್ರುಗಳು ಈ ಕೀಟದ ತಂಟೆಗೆ ಹೋಗುವುದಿಲ್ಲ. ಅಷ್ಟೇ ಅಲ್ಲದೆ ಇದು ಪರಿಸರದ ಉಷ್ಣತೆಯಿಂದಲು ರಕ್ಷಣೆ ನೀಡುತ್ತದೆ. ಒಂದು ವೇಳೆ ಈ ಹೊದಿಕೆ ಏನಾದರು ಇರದಿದ್ದ ಪಕ್ಷದಲ್ಲಿ ಕೀಟ ಒಣಗಿ ಸತ್ತೇ ಹೋಗುತ್ತದೆ. ಈ ಕೀಟ ಗಿಡದ ರಸವನ್ನು ಸೇವಿಸಿದರು ಸಾಮಾನ್ಯವಾಗಿ ಗಿಡಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ ಆದರೆ ಕೆಲವು ಪ್ರಬೇಧಗಳಿಂದ ವ್ಯವಸಾಯಕ್ಕೆ ಹಾನಿಯಾಗುತ್ತದೆ.

ಚಿಕ್ಕ ವಯಸ್ಸಿನಲ್ಲಿ (Nymph stage) ಹಸಿರು ಬಣ್ಣದಲ್ಲಿರುತ್ತದೆ. ಆದರೆ ವಯಸ್ಕ ಕೀಟವಾಗಿ ಮಾರ್ಪಾಡಾದ ನಂತರ ವರ್ಣಮಯವಾಗುತ್ತದೆ. ಈ ಕೀಟಗಳ ಇನ್ನೊಂದು ವಿಶೇಷತೆ ಏನು ಗೊತ್ತ? ಇವು ತಮ್ಮ ದೇಹದ ಉದ್ದಕ್ಕಿಂತ ನೂರು ಪಟ್ಟು ಹೆಚ್ಚು ದೂರಕ್ಕೆ ಜಿಗಿಯಬಲ್ಲವು!!!!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...