ಬೆಂಗಳೂರಿನ ಆಕಾಶದ ತುಂಬಾ ಮುಂಗಾರು ಪೂರ್ವ ಮೋಡಗಳು ಆವರಿಸಿತ್ತು. ತಾಪಮಾನವೂ ಇಳಿದು ಸ್ವಲ್ಪ ನಿರಾಳವೆನಿಸಿತ್ತು. ಈ ಮಳೆ ಮೋಡದ ದಿನಗಳು ಚೇತೋಹಾರಿ! ನಮ್ಮ ಮನೆಯ ಮುಂದೆ ಇರುವ ನೇರಳೆ ಮರ (Syzygium cumini) ಈಗ ಹೊಸದಾಗಿ ಚಿಗುರಿದ ಎಲೆಗಳಿಂದ ಉಜ್ವಲವಾಗಿ ಹೊಳೆಯುತ್ತಿತ್ತು. ಈ ನಿತ್ಯಹರಿದ್ವರ್ಣ ಪ್ರಭೇದ ಸದಾ ಕಾಲ ಎಲೆಗಳಿಂದ ತುಂಬಿದ್ದರೂ ಮಳೆಯಿಂದ ತೊಳೆದ ಎಲೆಗಳು ಹಸುರಿನಿಂದ ಕಂಗೊಳಿಸುತ್ತಿದ್ದವು. ನೇರಳೆ ಹಣ್ಣುಗಳೆಂದರೆ ಯಾರಿಗೆ ಇಷ್ಟವಿಲ್ಲ? ಆದರೆ ನಮ್ಮ ಮನೆಯ ಮುಂದಿನ ಈ ಮರ ಇನ್ನೂ ಹಣ್ಣು ಬಿಡಲು ಪ್ರಾರಂಭಿಸಿಲ್ಲ!
ಈ ಚಿಕ್ಕ ಮರಕ್ಕೂ ತನ್ನದೇ ಆದ ಒಂದು ಕಥೆಯಿದೆ. ಇದು ಸಣ್ಣ ಗಿಡವಾಗಿದ್ದಾಗ
ಜಿ.ಕೆ.ವಿ.ಕೆ ಸಮೀಪದ ನಮ್ಮ Officeನ ಮುಂದೆ ನೆಡಲು
ಇದನ್ನು ತಂದಿದ್ದೆವು. ಆದರೆ ಆ
ಕಟ್ಟಡದ ಯಜಮಾನ ಅದನ್ನು ಅಲ್ಲಿ ನೆಡಲು ಒಪ್ಪಲಿಲ್ಲ! ಕಾರಣ ಸರಳ - ಮುಂದೊಂದು ದಿನ ಅದು ಹಣ್ಣು ಬಿಟ್ಟು,
ಮಕ್ಕಳು ನೇರಳೆ ಹಣ್ಣಿಗಾಗಿ ಕಲ್ಲು ಎಸೆದರೆ? ನಮ್ಮ Officeನ ಕಟ್ಟಡದಲ್ಲಿ ಬಹುತೇಕ
ಗಾಜು ಇರುವುದರಿಂದ ನೇರಳೆ ಗಿಡವನ್ನು ಅಲ್ಲಿ ನೆಡುವುದು ಒಳ್ಳೆಯದಲ್ಲ ಎಂದು ಭಾವಿಸಿದ. ಎಂಥಾ ದೂ(ದು)ರಾಲೋಚನೆ! ಹೀಗೆ ಪಕ್ಕಕ್ಕಿಟ್ಟ
ಗಿಡವನ್ನು ಒಂದು ದಿನ ಸದ್ದಿಲ್ಲದೆ ಮನೆಗೆ ತಂದೆ. Officeನಲ್ಲಿ ಅದು ಯಾರ ಗಮನಕ್ಕೂ ಬರಲಿಲ್ಲ.
ಮನೆಗೆ ತಂದಾಗ
ಎಲ್ಲರೂ ಅದನ್ನು ಮಾವಿನ ಗಿಡವೆಂದೇ ಭಾವಿಸಿದರು. ನಮ್ಮ ಮನೆಯಲ್ಲಿ ಗಿಡ ನೆಡುವಂತಹ ಯಾವುದೇ
ಸಾಧನಗಳಿಲ್ಲದ ಕಾರಣ ಅದನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ನೆಡಲು ಸಾಧ್ಯವಾಗಲೇ ಇಲ್ಲ. ನಂತರ 2019ರಲ್ಲಿ ನಾನು ನನ್ನ ಕೆಲಸದ ಸಲುವಾಗಿ ಹೊರಗೆ
ಹೋಗಿದ್ದಾಗ ಮನೆಯವರು ಯಾರಿಗೋ ಹೇಳಿ ಅದನ್ನು ನೆಡಸಿದ್ದರು. ಆದರೆ ಅಲ್ಲಿಂದ ಆ ಗಿಡದ ಕಷ್ಟಗಳು ಆರಂಭವಾಯಿತು!
ಬೇಲಿ ಇಲ್ಲದ ಕಾರಣ ಬೀಡಾಡಿ
ದನಗಳು ಹೋಗುವಾಗ ಬರುವಾಗ ಗಿಡದ ಎಲೆಗಳನ್ನೆಲ್ಲಾ ತಿನ್ನುತ್ತಿದ್ದವು. ಬಿದಿರುಕಡ್ಡಿಗಳನ್ನು
ತಂದು ಅದರ ಸುತ್ತ ಬೇಲಿ ಮಾಡುವವರೆಗೆ ಅದು ಮುಂದುವರೆದಿತ್ತು. ಹಬ್ಬಗಳ ಸಮಯದಲ್ಲಿ ಮತ್ತೊಂದು ಸಮಸ್ಯೆ ಎದುರಾಯಿತು – ಅದು ಮಾವಿನ ಗಿಡವೋ, ನೇರಳೆ ಗಿಡವೋ ತಿಳಿಯದ ನಗರದ
ಜನಗಳು, ಮಾವಿನ ಎಲೆಗಳೆಂದೇ
ಭಾವಿಸಿ ತೋರಣ ಕಟ್ಟಲು ಎಲೆಗಳನ್ನು ಕತ್ತರಿಸಿಕೊಂಡು ಹೋಗುತ್ತಿದ್ದರು. ಕೆಲ ದಿನಗಳವರೆಗೆ
ಎಲೆಗಳಿಲ್ಲದೇಹೋದರೂ ಗಿಡ ಬದುಕಿತು, ಬೆಳೆಯಿತು.
ಗಿಡ ಎತ್ತರವಾಗಿ
ಮರವಾಗಿ ಬೆಳೆಯುತ್ತಿದ್ದಂತೆ ರಸ್ತೆಯಲ್ಲಿ ಹೋಗುವ ದೊಡ್ಡ ವಾಹನಗಳು ಅದಕ್ಕೆ ಡಿಕ್ಕಿ
ಹೊಡೆದು ಹೋಗುತ್ತಿದ್ದವು. ಈ ಅಫಘಾತಗಳನ್ನೆಲ್ಲಾ ಸಹಿಸಿಕೊಂಡು ಮರವಾಗಿ ನೆರಳು ನೀಡುವಷ್ಟು ಅಗಲ
ಹರಡಿಕೊಂಡಿತು. ನೆರೆಮನೆಯವನೊಬ್ಬ ಅದರ
ನೆರಳಲ್ಲಿ ತನ್ನ ಕಾರನ್ನು ನಿಲ್ಲಿಸಲು ಶುರುಮಾಡಿದ. ಆದರೆ ಕಾರಿನ ಮೇಲೆಲ್ಲಾ ಅಂಟು ದ್ರವ ಬಿದ್ದು
ಕರೆಯಾಗಲು ಶುರುವಾಯಿತು. ಮರವನ್ನೇ ಕತ್ತರಿಸುವಂತೆ ಮನೆಯವರಲ್ಲಿ ಹೇಳಿದನಂತೆ. ಮನೆಯವರು ಮರ
ಕತ್ತರಿಸಲು ನಗರಪಾಲಿಕೆಯನ್ನು ಕೇಳಬೇಕೆಂದು ಹೇಳಿದಾಗ ವಿಷಯ ಅಲ್ಲಿಗೆ ನಿಂತಿತು.
ಅವನು ತನ್ನ ಕಾರಿಗೆ ಒಂದು ಕವರ್ ತಂದು ಮುಚ್ಚಲು ಪ್ರಾರಂಭಿಸಿದ.
ಈಗ ಮರ ಎರಡನೇ
ಮಹಡಿಯ ಎತ್ತರಕ್ಕೆ ಬೆಳೆದಿದೆ. ನನ್ನ ಕೊಠಡಿಯಿಂದ ಅದನ್ನು ನೋಡಬಹುದಾಗಿದೆ. ಇನ್ನೂ ಹಣ್ಣು
ನೀಡಿಲ್ಲವಾದರೂ ಅದು ಸಲಹುವ ಜೀವಿಗಳಿಗೆ ಲೆಕ್ಕವಿಲ್ಲ. ಪ್ರತಿದಿನವೂ ವಿವಿಧ ಪಕ್ಷಿಗಳು ಮರಕ್ಕೆ
ಬರುತ್ತವೆ. ಮೊದಲ ಬಾರಿಗೆ ಮನೆಯ ಹತ್ತಿರ ಒಂದು ಬಾರಿಗೆ ಗೋಲ್ಡನ್ ಓರಿಯೋಲ್ ಪಕ್ಷಿಯನ್ನು ಇದೆ
ಮರದ ಮೇಲೆ ನೋಡಿದೆ. ಹಕ್ಕಿಗಳ ಜತೆಗೆ ಚಿಟ್ಟೆಗಳು ಈಗ ಪ್ರತಿದಿನ ಬರುತ್ತವೆ. ವಿಶೇಷವಾಗಿ ‘ಗಾಡಿ
ಬ್ಯಾರನ್’ ಎಂಬ ಸುಂದರ ಚಿಟ್ಟೆ ನೋಡಿದೆ.
ಒಂದು ಮಧ್ಯಾಹ್ನ
ಕೆಳಗೆ ಇಳಿದು ಹೋಗುವಾಗ ಮರದ ಮೇಲೆ ಗಮನಹರಿಯಿತು. ಒಂದು ದೊಡ್ಡ ಚಿಟ್ಟೆ! ಯಾವುದೋ ಇದುವರೆವಿಗೂ
ನೋಡಿರದ ಚಿಟ್ಟೆಯಂತೆ ಕಂಡಿತು. Blue ವರ್ಗಕ್ಕೆ ಸೇರಿದ ಚಿಟ್ಟೆಯಿರಬೇಕು. ಚಿಟ್ಟೆ ಯಾವುದೆಂದು ಗೊತ್ತಾಗಲಿಲ್ಲ, ಆದರೆ
ಇಡೀ ಮರ ಕೀಟಗಳ ಚಟುವಟಿಕೆಯಿಂದ ತುಂಬಿಹೋಗಿತ್ತು. ಜೇನುಹುಳಗಳು, ಕಣಜಗಳು, ವಿವಿಧ
ಬಣ್ಣದ ನೊಣಗಳು ಮತ್ತು ಗೊತ್ತೇಇರದ ಹಲವಾರು ಕೀಟಗಳು. ಸುಮಾರು ಒಂದು ಗಂಟೆ ಕಾಲ ನಾನು ಅವುಗಳನ್ನು ನೋಡುತ್ತಾ, Photo ತೆಗೆಯುತ್ತಾ ನಿಂತೆ. ಕನಿಷ್ಠ ಹನ್ನೊಂದು ವಿಭಿನ್ನ ಪ್ರಭೇದದ
ಕೀಟಗಳನ್ನು Photo ತೆಗೆದು ಗುರುತಿಸಿದೆ. Photo ತೆಗೆಯಲಾಗದೆ ಉಳಿದವು ಹಲವಾರು. ಪ್ರಭೇದಗಳ
ಸಂಖ್ಯೆ ಇಂದಿಗೂ ಮುಂದುವರೆದಿದೆ.
ನೇರಳೆ ಮರದ ಬಗ್ಗೆ
ಓದುತ್ತಿದ್ದಂತೆ ಯಾಕೆ ಇಷ್ಟೆಲ್ಲಾ ಕೀಟಗಳು ಅಲ್ಲಿಗೆ ಎಡತಾಕುತ್ತಿವೆ ಎಂದು ತಿಳಿಯಿತು. ಈ
ಮರದ ಎಲೆಗಳಿಂದ ಒಂದು ಸಿಹಿ ರಸ ಸ್ರವಿಸುತ್ತದೆ, ಇದೇ ಕೀಟಗಳನ್ನು ಆಕರ್ಷಿಸುತ್ತದೆ. ಆ ಸಿಹಿ ರಸವೇ ನೆರೆಮನೆಯವನ ಕಾರಿನ
ಮೇಲೆ ಬಿದ್ದು ಕರೆ ಉಂಟು ಮಾಡುತ್ತಿತ್ತು. ಈಗ ಮರದ ಮೇಲೆ ಒಂದು ಅದ್ಭುತವಾದ ಚಿಕ್ಕ ಪ್ರಪಂಚ ನಿರ್ಮಾಣವಾಗಿತ್ತು!
ನೇರಳೆಯ ಪಕ್ಕದಲ್ಲಿ
ನಗರಪಾಲಿಕೆಯವರು ಆಕಾಶ ಮಲ್ಲಿಗೆ (Indian Cork Tree) ಎಂಬ ವಿದೇಶಿ ಮರವನ್ನು ನೆಟ್ಟಿದ್ದರು. ಅದು ಬೇಗ ಬೆಳೆದಿತ್ತಾದರೂ ಅದು
ನಿರ್ಜೀವವಾಗಿ ಕಾಣಿಸಿತು. ನೇರಳೆಮರದಲ್ಲಿ ಜೀವ ಚಟುವಟಿಕೆ ಗರಿಗೆದರಿದ್ದಾಗ ಈ ವಿದೇಶಿ ಮರ ಮೌನವಾಗಿ
ನಿಂತಿತ್ತು.
ಈ ನೇರಳೆ ಮರವನ್ನು ನೋಡಿದಾಗ, ಅದು ತನ್ನೊಳಗೆ ಒಂದು ಸಣ್ಣ ಕಾಡನ್ನೇ ಒಳಗೊಂಡಿರುವಂತೆ ಕಂಡಿತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ