ವಿಷಯಕ್ಕೆ ಹೋಗಿ

ಅಶೋಕ

ಬಹುಶಃ ನಾವೆಲ್ಲ ಅಶೋಕ ಮರದ ಹೆಸರನ್ನು ಕೇಳಿರುತ್ತೇವೆ. ಸುಂದರ ಹೂವನ್ನು ತಳೆಯುವ ಈ ಮರ ಭಾರತದಲ್ಲಿ ಸಾಂಸ್ಕೃತಿಕವಾಗಿ ಮುಖ್ಯವಾದ ಮರ. ಇದು ಮೂಲತಃ ಭಾರತ, ಮ್ಯಾನ್ಮಾರ್ ಮತ್ತು ಮಲಯ ದೇಶಗಳಲ್ಲಿ ಕಂಡುಬರುತ್ತದೆ.


ಸಾರಕ ಅಸೋಕ (Saraca asoca) ಇದರ ವೈಜ್ಞಾನಿಕ ಹೆಸರು. ಇದಕ್ಕೆ ಇಂಗ್ಲೀಷ್‌ನಲ್ಲಿ ಸಾರೊಲೆಸ್ ಟ್ರೀ ಎನ್ನುವ ಹೆಸರು ಇದೆ. ಕನ್ನಡದಲ್ಲಿ ಇನ್ನೊಂದು ಹೆಸರು ಅಚೇಂಗೆ. ಉಳಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಅಶೋಕ ಅಥಾವ ಸೀತಾ ಅಶೋಕ ಎನ್ನುವ ಹೆಸರಿದೆ.

ಭಾರತೀಯ ಪುರಾಣಗಳಲ್ಲು ಅಶೋಕ ಮರದ ಉಲ್ಲೇಖಗಳು ಕಂಡುಬರುತ್ತವೆ. ಸೀತೆಯನ್ನು ಅಪಹರಿಸಿದ ರಾವಣ, ಅವಳನ್ನು ಅಶೋಕವನದಲ್ಲಿ ಅಶೋಕ ಮರದ ಕೆಳಗೆ ಬಂಧಿಯಾಗಿರಿಸಿರುತ್ತಾನೆ. ಗೌತಮ ಬುದ್ಧ ಅಶೋಕ ಮರದ ಕೆಳಗೆ ಜನಿಸಿದ ಎಂಬ ನಂಬಿಕೆ ಬೌದ್ಧರಲ್ಲಿ ಇದೆ. 
ಅಶೋಕ ಒಂದು ಚಿಕ್ಕ ಗಾತ್ರದ ಮತ್ತು ನಿತ್ಯಹರಿದ್ವರ್ಣದ ಮರ. ಇದು ಸುಮಾರು ೧೫-೨೦ ಅಡಿಯವರೆಗು ಬೆಳೆಯಬಲ್ಲದು. ಇದರ ಕಾಂಡ ಕಡು ಬಣ್ಣದಾಗಿದ್ದು, ಕೆಲವೊಮ್ಮೆ ಗಂಟುಗಳು ಕಾಣಿಸುತ್ತವೆ. ತೊಗಟೆಯ ಮೇಲೆ ಸಣ್ಣ ಬಿರುಕುಗಳು ಇರುತ್ತವೆ. ಇದರ ಕೊಂಬೆಗಳು ನುಣುಪಾಗಿರುತ್ತವೆ. ಎಲೆಗಳು ಸಂಕೀರ್ಣ ವಾಗಿದ್ದು. ಪ್ಯಾರಿಪಿನ್ನೇಟ್ ರೀತಿಯಲ್ಲಿ ಇರುತ್ತವೆ. ಉಪಎಲೆಗಳು ಎದುರುಬದುರಾಗಿ ಇರುತ್ತವೆ. ಈ ಮರದ ಮುಖ್ಯ ಆಕರ್ಷಣೆ ಎಂದರೆ ಇದರ ಹೂವುಗಳು. ವರ್ಷದುದ್ದಕ್ಕೂ ಹೂವುಗಳು ಕಾಣಿಸುತ್ತವೆ ಆದರೆ ಜವವರಿ ಮತ್ತು ಫೆಬ್ರವರಿಯಲ್ಲಿ ಹಲವಾರು ಹೂವಿನ ಗೊಂಚಲಿನಿಂದಾಗಿ ಮರ ಸುಂದರವಾಗಿ ಕಾಣುತ್ತದೆ. ಹೂ ಅರಳುವಾಗ ಹಳದಿ ಬಣ್ಣದಲ್ಲಿದ್ದು ಅನಂತರ ಕಿತ್ತಳೆ ಮತ್ತು ಕೊನೆಯಲ್ಲಿ ಕೆಂಪು ಬಣ್ಣದ್ದಾಗಿರುತ್ತದೆ. ಇದರ ಬೀಜಕೋಶ ಚಪ್ಪಟೆಯಾಗಿದ್ದು ಉದ್ದವಾಗಿರುತ್ತದೆ. 
ಸಾಂಸ್ಕೃತಿಕವಾಗಿ ಮುಖ್ಯವಾಗಿರುವ ಈ ಮರ ಆಯುರ್ವೇದದಲ್ಲು ಬಳಕೆಯಲ್ಲಿದೆ. ಇದರ ತೊಗಟೆಯಿಂದ ತಯಾರಿಸುವ ಔಷಧಿ ಅನೇಕ ಖಾಯಿಲೆಗೆ ಬಳಸುವುದುಂಟು. ಇದನ್ನು ಅಲಂಕಾರಿಕವಾಗಿ ಸಹ ಬೆಳೆಸಲಾಗುತ್ತದೆ.

ಇತ್ತೀಚಿಗೆ ಅಶೋಕ ತನ್ನ ಸ್ವಾಭಾವಿಕ ನೆಲೆಯಲ್ಲಿ ಅಪರೂಪವಾಗುತ್ತಿದೆ. ಹಾಗಾಗಿ ಐಯೂಸಿಎನ್ ಕೆಂಪು ಪಟ್ಟಿಯಲ್ಲಿ ಇದನ್ನು 'ಅಪಾಯಕ್ಕೆ ಒಳಗಾಗ ಬಹುದು' ಎಂದು ಪರಿಗಣಿಸಲಾಗಿದೆ. 
ಕೆಲವರು ಅಶೋಕ ಎಂದರೆ ಇನ್ನೊಂದು ಮರದೊಂದಿಗೆ ಗೊಂದಲಗೊಳ್ಳುತ್ತಾರೆ. ಆದರೆ ಅದು ಸಂಪೂರ್ಣವಾಗಿ ಭಿನ್ನವಾದ ಮರ (Polyalthia longifolia). ಗೊಂದಲ ನಿವಾರಣೆಗಾಗಿ ಆ ಮರವನ್ನು ಮದ್ರಾಸ್ ಅಶೋಕ ಅಥವಾ ಫಾಲ್ಸ್ ಅಶೋಕ ಎಂದು ಕರೆಯುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.