ವಿಷಯಕ್ಕೆ ಹೋಗಿ

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ


ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ. ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ. ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ.

ಮಕರ ಸಂಕ್ರಾಂತಿ:
ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ. ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ, ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ, ವೃಷಭರಾಶಿ,..ಮೀನರಾಶಿಗಳೆಂದು ಕರೆಯುತ್ತೇವೆ. ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು. 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ, ಆ ಬಿಂದುವಿನಿಂದ ಆರಂಭಿಸಿ, ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ. ಇದೇ 'ಸೌರಮಾನ ಯುಗಾದಿ' ಎಂದು ಆಚರಿಸಲ್ಪಡುತ್ತದೆ. ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ. ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ. ಈ ಸೌರವರ್ಷದ ಪ್ರಾರಂಭ ಅಥವಾ ಸೌರಮಾನ ಯುಗಾದಿಯು ಸಾಮಾನ್ಯವಾಗಿ ಎಪ್ರಿಲ್ 14 ಅಥವಾ 15ರಂದು ಬರುತ್ತದೆ. ಸೂರ್ಯನು ಮಕರರಾಶಿಯನ್ನು ಪ್ರವೇಶಮಾಡುವ ಪರ್ವಕಾಲವನ್ನು ಮಕರ ಸಂಕ್ರಮಣ ಅಥವಾ ಮಕರ ಸಂಕ್ರಾಂತಿ ಎಂದು ಕರೆಯುತ್ತೇವೆ. ಈ ಮಕರ ಸಂಕ್ರಾಂತಿಯನ್ನು ಸುಗ್ಗೀ ಹಬ್ಬವಾಗಿ ದೇಶದ ಬಹುಭಾಗಗಳಲ್ಲಿ ಆಚರಿಸಲಾಗುತ್ತದೆ. ಈ ಶತಮಾನದಲ್ಲಿ ಸಾಮಾನ್ಯವಾಗಿ ಸಂಕ್ರಾಂತಿಯು ಜನವರಿ 14 ಅಥವಾ 15ರಂದು ಉಂಟಾಗುತ್ತದೆ.

ಉತ್ತರಾಯಣ:
ಭೂಮಿಯ ಸಮಭಾಜಕ ವೃತ್ತವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ಗೋಳಕ್ಕೆ ವಿಷುವದ್ ವೃತ್ತ (Celestial Equator) ಎನ್ನಲಾಗುತ್ತದೆ. 'ಕ್ರಾಂತಿವೃತ್ತ' (Ecliptc) ಹಾಗೂ 'ವಿಷುವದ್ ವೃತ್ತ' (Celestial Equator) ಇವೆರಡು ಮಹಾವೃತ್ತಗಳು ಎರಡು ಬಿಂದುಗಳಲ್ಲಿ ಛೇದಿಸುತ್ತವೆ. ಆ ಎರಡು ಬಿಂದುಗಳು ಒಂದಕ್ಕೊಂದು 180 ಡಿಗ್ರಿಗಳ ಅಂತರದಲ್ಲಿದೆ. ಈ ಬಿಂದುಗಳಿಗೆ ಮಹಾ ವಿಷುವ (vernal equinox) ಮತ್ತು ಜಲ ವಿಷುವ (autumnal equinox) ಎನ್ನಲಾಗುತ್ತದೆ. ಕ್ರಾಂತಿವೃತ್ತ ಮತ್ತು ವಿಷುವದ್ ವೃತ್ತಗಳ ಸಮತಲಗಳು (planes) ಒಂದಕ್ಕೊಂದು 231/2 ಡಿಗ್ರಿ ಓರೆಯಾಗಿವೆ.

ಸೂರ್ಯನು ಮಾರ್ಚ್ 21ರ ಹೊತ್ತಿಗೆ ಮಹಾವಿಷುವಕ್ಕೆ (vernal equinox) (ಮಾರ್ಚ್ 21ರಂದು ಸೂರ್ಯನ ಕಿರಣಗಳು ಭೂಮಿಯ ಸಮಭಾಜಕ ವೃತ್ತಕ್ಕೆ - Equator - ಲಂಬವಾಗಿರುತ್ತದೆ) ಬಂದು ನಂತರ ವಿಷುವದ್ ವೃತ್ತದ ಉತ್ತರಕ್ಕೆ ಚಲಿಸುವನು. ಮಾರ್ಚ್ 21ರಿಂದ ಜೂನ್ 22ರ ತನಕ ಸೂರ್ಯನು ಉತ್ತರದ ಕಡೆಗೆ ಚಲಿಸುತ್ತಾ, ಜೂನ್ 22ರಂದು ಆತನ ಉತ್ತರಾಯಣದ ಪರಮೋಚ್ಚ ಬಿಂದುವನ್ನು ತಲುಪಿ, ಉತ್ತರಾರ್ಧಗೋಳದ 231/2 ಡಿಗ್ರಿಯನ್ನು ತಲುಪುತ್ತಾನೆ. (ಜೂನ್ 22ರಂದು ಸೂರ್ಯನ ಕಿರಣಗಳು ಉತ್ತರಾರ್ಧಗೋಳದಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತಕ್ಕೆ - Tropic of Cancer – ಲಂಬವಾಗಿರುತ್ತದೆ. ಇಲ್ಲಿಂದ ಮುಂದೆ ಸೂರ್ಯ ದಕ್ಷಿಣಕ್ಕೆ ಚಲಿಸುತ್ತಾನೆ. ಇದೇ ದಕ್ಷಿಣಾಯಣ) ನಂತರ ಸೆಪ್ಟೆಂಬರ್ 23ರವರೆಗೆ ಸೂರ್ಯನು ದಕ್ಷಿಣಕ್ಕೆ ಚಲಿಸಿ, ಆ ದಿನದಂದು ಅದು ಮತ್ತೆ ಸಮಭಾಜಕ ವೃತ್ತಕ್ಕೆ ಲಂಬವಾಗಿ ಬರುತ್ತದೆ. ಅಂದು ಸೂರ್ಯನು ಜಲ ವಿಷುವ (autumnal equinox)ದಲ್ಲಿ ಇರುತ್ತಾನೆ. ಸೆಪ್ಟೆಂಬರ್ 23ರಿಂದ ಡಿಸೆಂಬರ್ 22ರ ವರೆಗೆ ಸೂರ್ಯನು ವಿಷುವದ್ ವೃತ್ತದಿಂದ ದಕ್ಷಿಣಾಭಿಮುಖವಾಗಿ ಚಲಿಸುತ್ತಾನೆ. ಡಿಸೆಂಬರ್ 22 ರಂದು ಸೂರ್ಯನ ಕಿರಣಗಳು ದಕ್ಷಿಣಾರ್ಧಗೋಳದಲ್ಲಿ ಮಕರ ಸಂಕ್ರಾಂತಿ ವೃತ್ತಕ್ಕೆ (Tropic of Capricorn) ಲಂಬವಾಗಿರುತ್ತದೆ. ಇಲ್ಲಿಂದ ಮುಂದೆ ಸೂರ್ಯ ಉತ್ತರಕ್ಕೆ ಚಲಿಸುತ್ತಾನೆ. ಇದೇ ಉತ್ತರಾಯಣ.

 
ಇಲ್ಲಿಗೆ ಒಂದು ವಿಷಯ ಸ್ಪಷ್ಟವಾಯಿತು. ಮಕರ ಸಂಕ್ರಾಂತಿ ಮತ್ತು ಉತ್ತರಾಯಣ ಪುಣ್ಯಕಾಲ ಎರಡೂ ಬೇರೆ ದಿನ ನಡೆಯುವ ವಿದ್ಯಮಾನಗಳು. ಆದರೆ ಏಕೆ ಹೀಗಾಯಿತು? ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ.

ಕ್ರಿ.. 1220 ರಲ್ಲಿ ಮಕರ ಸಂಕ್ರಾಂತಿ ಜನವರಿ 4 ಮತ್ತು ಉತ್ತರಾಯಣ ಪುಣ್ಯಕಾಲ 1219ರ ಡಿಸೆಂಬರ್ 15ರಂದು ಸಂಭವಿಸಿತ್ತು.

ಕ್ರಿ.. 1620 ರಲ್ಲಿ ಮಕರ ಸಂಕ್ರಾಂತಿ ಜನವರಿ 9 ಮತ್ತು ಉತ್ತರಾಯಣ ಪುಣ್ಯಕಾಲ 1619ರ ಡಿಸೆಂಬರ್ 12ರಂದು ಸಂಭವಿಸಿತ್ತು.

ಕ್ರಿ.. 2020 ರಲ್ಲಿ ಮಕರ ಸಂಕ್ರಾಂತಿ ಜನವರಿ 15 ಮತ್ತು ಉತ್ತರಾಯಣ ಪುಣ್ಯಕಾಲ 2019ರ ಡಿಸೆಂಬರ್ 22ರಂದು ಸಂಭವಿಸಿದೆ.

ಈ ಎರಡೂ ಖಗೋಳ ವಿದ್ಯಮಾನಗಳು ಒಟ್ಟಾಗಿ ಬರುತ್ತಿದ್ದ ಕಾಲದಲ್ಲಿ ಈ ಮಕರ ಸಂಕ್ರಾಂತಿ ಹಬ್ಬದ ಆಚರಣೆ ಆರಂಭವಾಗಿರಬಹುದು. ಆದರೆ ಕಾಲ ಸರಿದಂತೆ ಏಕೆ ಈ ವಿದ್ಯಮಾನಗಳು ಸಂಭವಿಸುವ ದಿನಗಳು ಬೇರೆಯಾಗಿದೆ?

ನಮಗೆ ಈಗಾಗಲೇ ತಿಳಿದಿರುವಂತೆ ಭೂಮಿಯು ಒಂದು ವರ್ಷದಲ್ಲಿ ಸೂರ್ಯನ ಸುತ್ತಲೂ ಭ್ರಮಿಸುತ್ತದೆ. 24 ಗಂಟೆಗಳಲ್ಲಿ ತನ್ನ ಅಕ್ಷದ ಮೇಲೆ ಒಂದು ಸಲ ಪರಿಭ್ರಮಿಸುತ್ತದೆ. ಈ ಎರಡು ಚಲನೆಗಳಲ್ಲದೆ ಭೂಮಿಯ ಮೂರನೆಯ ಚಲನೆ ಒಂದಿದೆ. ಈ ಚಲನೆ ಭ್ರಮಣೆ, ಪರಿಭ್ರಮಣೆಗಳಿಗಿಂತ ಬಹಳ ನಿಧಾನ. ಭೂಮಿಯ ಭ್ರಮಣೆಯ ಅಕ್ಷದ ಓಲಾಟ - ಸುಮಾರು 25000 ವರ್ಷಗಳ ಅವಧಿಯದು. ಇದೇನೂ ನಮಗೆ ಬಾಧಕವಲ್ಲ ಎಂದು ಪಕ್ಕಕ್ಕಿಡಬಹುದಾದರೂ 150-200 ವರ್ಷಗಳಲ್ಲಿ ಇದರ ಪ್ರಭಾವ ಕಾಣುತ್ತದೆ. ಉತ್ತರಾಯಣ ಮತ್ತು ಮಕರ ಸಂಕ್ರಮಣದ ಗೊಂದಲ ಆರಂಭವಾಗಿದ್ದೇ ಇದರಿಂದ. ಭಾರತದಲ್ಲಿ ಈಗಲೂ ಜನವರಿ 14ನ್ನು ಉತ್ತರಾಯಣ ಎಂದೇ ಆಚರಿಸುತ್ತಾರೆ. ಆದರೆ ಆಕಾಶದ ಗಡಿಯಾರದಲ್ಲಿ ಸೂರ್ಯ ಉತ್ತರಕ್ಕೆ ಹೊರಳುವುದು ಡಿಸೆಂಬರ್ 22ರಂದು. ಭೂಮಿಯ ಅಕ್ಷ ನಿಧಾನವಾಗಿ ಬದಲಾಗುತ್ತಿರುವುದರಿಂದ ಈ ವ್ಯತ್ಯಾಸ ಉಂಟಾಗುತ್ತದೆ. ಇಂದು ಭೂಮಿಯ ಅಕ್ಷದ ದಿಕ್ಕಿನಲ್ಲಿ ಧ್ರುವ ನಕ್ಷತ್ರ ಇದೆ. 5000 ವರ್ಷಗಳ ಹಿ೦ದೆ ಅದು ಧ್ರುವ ನಕ್ಷತ್ರವಾಗಿರಲಿಲ್ಲ. 5000 ವರ್ಷಗಳ ನಂತರವೂ ಅದು ಧ್ರುವ ನಕ್ಷತ್ರವಾಗಿ ಇರುವುದಿಲ್ಲ.

ಸುಮಾರು 1500-1600 ವರ್ಷಗಳ ಹಿಂದೆಯೇ ಈ ಅಂಶವನ್ನು ಗುರುತಿಸಿದ ಖಗೋಳ ವೀಕ್ಷಕರು ಅದರ ಸೂಕ್ಷ್ಮ ಪರಿಣಾಮಗಳನ್ನು ನಕ್ಷತ್ರಗಳ ಸೂಕ್ಷ್ಮ ಸ್ಥಾನಗಳ ಅಳತೆಯ ವ್ಯತ್ಯಾಸಗಳಿಂದ ಕಂಡುಹಿಡಿದುಕೊಂಡರು. ವರ್ಷ ವರ್ಷಕ್ಕೆ ಅಗತ್ಯವಾದ ತಿದ್ದುಪಡಿಗಳನ್ನು ಪಟ್ಟಿ ಮಾಡಿಕೊಂಡರು. ಈ ಸೂಕ್ಷ್ಮ ವ್ಯತ್ಯಾಸಗಳು ಸಾಮಾನ್ಯ ಜನರ ತಿಳುವಳಿಕೆಗೆ ಮೀರಿದ್ದು. ಹಾಗಾಗಿ ಪಂಚಾಂಗ ನಿರ್ಣಯ ಎಂಬುದು ಬಹಳ ಜಟಿಲ ಸಮಸ್ಯೆಯಾಯಿತು. ತಿಥಿ ನಿರ್ಣಯ ಎಂಬ ಹೆಸರಿನ ಹಲವಾರು ಗ್ರಂಥಗಳು ಬಂದವು. ಧಾರ್ಮಿಕ ಒಳಪಂಗಡಗಳ ಆಚರಣೆಗಳಲ್ಲಿ ವ್ಯತ್ಯಾಸಗಳನ್ನು ತಂದಿಟ್ಟವು. ಆಕಾಶವನ್ನು ನೋಡಿ ತಿದ್ದುಪಡಿ ಮಾಡುವ ವಿಧಾನ ಕೈಬಿಟ್ಟು ತಮ್ಮ ಹಿರಿಯರ ವರ್ಚಸ್ಸಿಗೇ ಮಹತ್ವ ಕೊಟ್ಟು ಎಲ್ಲರನ್ನು ಆಕಾಶದಿಂದ ವಿಮುಖಗೊಳಿಸಿದ್ದು ದೊಡ್ದ ಅನಾಹುತ ಎನ್ನಬಹುದು.

ಭೂಮಿಯ ಈ ಮೂರನೆಯ ಚಲನೆಯನ್ನು ಅರ್ಥ-ಮಾಡಿಕೊಳ್ಳಲು ಮೇಲಿನ ಚಿತ್ರ ನೋಡಿ. ಈಗ ಇರುವಂತೆ ಜುಲೈ ತಿಂಗಳಲ್ಲಿ ಉತ್ತರ ಧ್ರುವಕ್ಕೆ ಬಿಸಿಲು ಬೀಳುತ್ತದೆ. ಆರು ತಿಂಗಳ ನಂತರ ಜನವರಿಯಲ್ಲಿ ದಕ್ಷಿಣ ಧ್ರುವಕ್ಕೆ ಬಿಸಿಲು ಬೀಳುವುದು.

ಸುಮಾರು 10000-14000 ವರ್ಷಗಳ ನಂತರ ಭೂಮಿಯ ಭ್ರಮಣೆಯ ಅಕ್ಷವೇ ಬದಲಾಗುವುದರಿಂದ ಜುಲೈ ತಿಂಗಳಲ್ಲೇ ಭೂಮಿಯ ದಕ್ಷಿಣ ಧ್ರುವಕ್ಕೆ ಬಿಸಿಲು ಬೀಳುವುದು.

ಅಕ್ಷ ಹೀಗೆ ನಿಧಾನವಾಗಿ ಬದಲಾಗುತ್ತದೆ ಎಂಬ ಅಂಶ ಒಬ್ಬ ಮನುಷ್ಯನ ಜೀವಿತಾವಧಿಯಲ್ಲಿ ತಿಳಿಯುವಂತಹುದಲ್ಲ. ಸಾವಿರಾರು ವರ್ಷಗಳ ಅಂತರದಲ್ಲಿ ಬರಿಗಣ್ಣಿಗೆ ಗೋಚರವಾಗುವುದು. 1000 ವರ್ಷಗಳ ಹಿಂದೆ ಇಂದಿನ ಧ್ರುವ ನಕ್ಷತ್ರ ಅಕ್ಷದ ದಿಕ್ಕಿಗೆ ಇರಲಿಲ್ಲ. ಬೇರೊಂದು ನಕ್ಷತ್ರ ಥುಬಾನ್ ಎಂಬುದಿತ್ತು. ಈ ಪಲ್ಲಟವನ್ನು ಸೂಕ್ಷ್ಮ ವೀಕ್ಷಣೆಗಳಿಂದ ಗೊತ್ತುಪಡಿಸಿಕೊಳ್ಳಲಾಗಿದೆ.

ಇದೇ ಕಾರಣದಿಂದ ಉತ್ತರಾಯಣ ಹಾಗೂ ಮಕರ ಸಂಕ್ರಮಣಗಳು ಬೇರ್ಪಟ್ಟಿವೆ. ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಎರಡೂ ಒಂದೇ ಬಾರಿಗೆ ಸಂಭವಿಸುತ್ತಿತ್ತು (ಡಿಸೆಂಬರ್ ತಿಂಗಳಲ್ಲಿ). ಕ್ರಮೇಣ ಅಕ್ಷದ ಸುತ್ತುವಿಕೆಯಿಂದ ವಿಷುವದ್ ವೃತ್ತ ಹಾಗೂ ಕ್ರಾಂತಿ ವೃತ್ತಗಳು ಸಂಧಿಸುವ ಬಿಂದುವೇ ಸರಿಯತೊಡಗಿತು. ಹಾಗಾಗಿ ಮೇಷ ಪ್ರಥಮ ಬಿಂದು ಈಗ ಮೀನ ರಾಶಿಯಲ್ಲಿದೆ. ಈಗ ಉತ್ತರಾಯಣ ನಡೆಯುತ್ತಿರುವುದು ಸೂರ್ಯ ಧನುರಾಶಿಯಲ್ಲಿರುವಾಗ.

ಆಧಾರ:
ಭಾರತೀಯ ಖಗೋಲಶಾಸ್ತ್ರ - ಒಂದು ಕಿರುಪರಿಚಯ
ಲೇಖಕರು - ಡಾ|| ಎಸ್. ಬಾಲಚಂದ್ರರಾವ್

ಆಕಾಶದಲ್ಲಿ ಏನಿದೆ? ಏಕಿದೆ?
ಲೇಖಕರು - ಡಾ|| ಬಿ. ಎಸ್. ಶೈಲಜಾ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.