ವಿಷಯಕ್ಕೆ ಹೋಗಿ

ಇ-ತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿ


ವಿಶ್ವ ಇಂದು ಪ್ರಗತಿಯತ್ತ ದಾಪುಗಾಲು ಇರಿಸುತ್ತಾ ವೇಗವಾಗಿ ಪಯಣ ಮಾಡುತ್ತಿದೆ. ಮನುಷ್ಯನಿಗೆ ಅವಶ್ಯಕವಾದ ಸಹಸ್ರಾರು ವಿದದ ಉಪಕರಣಗಳು ಮಾರುಕಟ್ಟೆ ಪ್ರವೇಶಿಸಿವೆ. ಎಲೆಕ್ಟ್ರಾನಿಕ್ಸ್ ಉಪಕರಣಗಳಳ್ಲಿ ಪ್ಲಾಸ್ಟಿಕ್ ಬಳಕೆ ಅನಿವಾರ್ಯವಾಗಿ ಪರಿಣಮಿಸಿದೆ. ಜಾಗತೀಕರಣ, ಆಧುನೀಕರಣ, ತಂತ್ರಜ್ಞಾನದ ಶೀಘ್ರ ಬೆಳವಣಿಗೆ ಆದ ನಂತರ ಭಾರತದಲ್ಲಿ ಇ-ತ್ಯಾಜ್ಯದ ಪ್ರಮಾಣ ತ್ವರಿತಗತಿಯಲ್ಲಿ ಹೆಚ್ಚಾಗುತ್ತಿದೆ, ಸಿಲಿಕಾನ್ ಸಿಟಿಯಂದೇ ಹೆಸರಾದ ಬೆಂಗಳೂರು ಒಂದರಲ್ಲೇ ಪ್ರತಿವರ್ಷ 76,000 ಟನ್ ಇ-ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಅನಾವಶ್ಯಕ ಹಾಗೂ ನಿರುಪಯುಕ್ತ ಇ-ತ್ಯಾಜ್ಯವನ್ನು ವಿಲೇವಾರಿ ಮಾಡವಲ್ಲಿ ವಿಶ್ವ ಈಗ ಸವಾಲು ಎದುರಿಸುತ್ತಿದೆ.













ಈ ನಿಟ್ಟಿನಲ್ಲಿ ಭಾರತ ಸರ್ಕಾರ ಜಾರಿಗೆ ತಂದಿರುವ ಇ-ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆಗಳ ಸಂಬಂಧದ ನಿಯಮ ರಾಷ್ಟ್ರದಾದ್ಯಂತ ಜಾರಿಗೆ ಬಂದಿದೆ. ರಾಜ್ಯದಲ್ಲಿ ಈ ನಿಯಮವನ್ನು ಅನುಷ್ಠಾನಗೊಳಿಸುವ ಜವಬ್ದಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯದಾಗಿರುತ್ತದೆ. ಮುರಿದುಹೋದ, ಹಳೆಯದಾದ, ಮತ್ತು ಹಾಳದ ಎಲೆಕ್ಟ್ರಾನಿಕ್ಸ್ ಹಾಗೂ ವಿದ್ಯುನ್ಮಾನ ಉಪಕರಣಗಳ ತ್ಯಾಜ್ಯ ಇವುಗಳನ್ನು ಇ-ತ್ಯಾಜ್ಯ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಕೆಟ್ಟು ಹೋದ ದುರಸ್ತಿ ಆಗದ ಎಲೆಕ್ಟ್ರಾನಿಕ್ಸ್ ಹಾಗೂ ವಿದ್ಯುನ್ಮಾನ ಉಪಕರಣಗಳಾದ ಕಂಪ್ಯೂಟರ್, ಟಿವಿ, ಫ್ರಿಡ್ಜ್, ಮೊಬೈಲ್, ಜೆರಾಕ್ಸ್ ಮಷಿನ್À, ವಾಷಿಂಗ್ ಮಿಷಿನ್, ಏರ್‍ಕಂಡಿಷನರ್, ಪ್ರಿಂಟರ್, ಎಲೆಕ್ಟ್ರಾನಿಕ್ ಟೈಪ್‍ರೈಟರ್ಸ್ ಹೀಗೆ 23 ವಿವಿಧ ಬಗೆಯ ಎಲೆಕ್ಟ್ರಾನಿಕ್ಸ್ ಹಾಗೂ ವಿದ್ಯುನ್ಮಾನ ಉಪಕರಣಗಳನ್ನು ಇ-ತ್ಯಾಜ್ಯ ಎಂದು ಭಾರತ ಸರ್ಕಾರದ ಪರಿಸರ ಮಂತ್ರಾಲಯ ಘೋಷಿಸಿದೆ.


ಈ ಉಪಕರಣಗಳ ದುರಸ್ತಿ ಮರುಬಳಕೆ, ಪುನರ್‍ಬಳಕೆ ಮತ್ತು ವಿಲೇವಾರಿ ನಿಜಕ್ಕೂ ಸವಾಲಿನ ವಿಷಯವಾಗಿದೆ. ಶೀಘ್ರ ತಂತ್ರಜ್ಞಾನ ಬೆಳವಣಿಗೆ ಹಾಗೂ ಕಡಿಮೆ ವೆಚ್ಚದ ಹೊಸ ಹೊಸ ಎಲೆಕ್ಟ್ರಾನಿಕ್ಸ್ ಹಾಗೂ ವಿದ್ಯುನ್ಮಾನ ಉಪಕರಣಗಳು ಮಾರುಕಟ್ಟಗೆ ಬರುವುದರಿಂದ ಇ-ತ್ಯಾಜ್ಯ ಹೆಚ್ಚು ಹೆಚ್ಚಾಗಿ ಉತ್ಪತ್ತಿಯಾಗುತ್ತದೆ.


ಪ್ರತಿವರ್ಷ ವಿಶ್ವದಲ್ಲಿ 50 ದಶಲಕ್ಷ ಟನ್‍ಗಳಷ್ಟು ಇ-ತ್ಯಾಜ್ಯ ಉತ್ಪತ್ತಿಯಾಗುತ್ತದೆ ಎಂದು ಅಂದಾಜು ಮಾಡÀಲಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇ-ತ್ಯಾಜ್ಯವನ್ನು ಸಾಂಪ್ರದಾಯಕವಾಗಿ ಸಂಸ್ಕರಿಸದೆ ಇರುವುದರಿಂದ ಆರೋಗ್ಯ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಎಲೆಕ್ಟ್ರಾನಿಕ್ಸ್ ಹಾಗೂ ವಿದ್ಯುನ್ಮಾನ ಉಪಕರಣಗಳಲ್ಲಿ ಭಾರ ಲೋಹಗಳಾದ ಸೀಸ, ಕ್ಯಾಡ್ಮಿಯಂ, ಪಾದರಸ ಮುಂತಾದ ಲೋಹಗಳಿದ್ದು, ಇವು ಪರಿಸರದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ.

ಸೀಸವು ಒಂದು ವಿಷವಸ್ತುವಾಗಿದ್ದು ಮನುಷ್ಯನ ರಕ್ತದಲ್ಲಿ ಹೆಚ್ಚಿನ ಅಂಶ ಸೇರಿದ್ದಲ್ಲಿ ಅನೇಕ ಆರೋಗ್ಯದ ತೊಂದರೆಗಳು ಕಾಣಿಸಿಬಹುದು. ರಕ್ತಹೀನತೆ, ನಿಶ್ಶಕ್ತಿ ನರಗಳ ದೌರ್ಬಲ್ಯ, ರಕ್ತದೊತ್ತಡ, ನಿರ್ವೀರ್ಯತೆ, ತಲೆತಿರುಗುವಿಕೆ, ಅಂಗಾಂಗಳ ನೋವು, ಮಲಬದ್ಧತೆ ಮುಂತಾದ ಕಾಯಿಲೆಗಳು ಉಂಟಾಗಬಲ್ಲದು. ಬಹಳ ಮುಖ್ಯವಾಗಿ ಓದುವ ಮಕ್ಕಳ ರಕ್ತದಲ್ಲಿ ಸೀಸದ ಅಂಶವು ಹೆಚ್ಚಾದರೆ ಬುದ್ದಿಯ ಬೆಳವಣಿಗೆಯು ಕುಂಠಿತವಾಗುತ್ತದೆ. ಗರ್ಭಿಣಿ ಸ್ತ್ರೀಯರ ರಕ್ತದಲ್ಲಿ ಸೀಸದ ಅಂಶವು ಹೆಚ್ಚಾದರೆ ಬುದ್ಧಿಮಾಂದ್ಯ ಮಕ್ಕಳು ಹುಟ್ಟುವ ಸಂಭವವಿರುತ್ತದೆ. ಮನುಷ್ಯನ ರಕ್ತದಲ್ಲಿ 10 ಮೈಕ್ರೊಗ್ರಾಂ ಪರ್ ಡೆಸಿಲೀಟರ್‍ಗಿಂತ ಹೆಚ್ಚು ಪ್ರಮಾಣದಲ್ಲಿ ಸೀಸವು ಇರಬಾರದು. ಆದರೆ ಕೆಲವು ಸಂಸ್ಥೆಗಳು ನಡೆಸಿದ ಅಧ್ಯಯನದಂತೆ ಓದುವ ಮಕ್ಕಳಲ್ಲಿ ಇದಕ್ಕಿಂತ ಹೆಚ್ಚಿನ ಸೀಸ ಇರುವುದು ಕಂಡುಬಂದಿದೆ.

ಅದೇ ರೀತಿ ಪಾದರಸವು ಮತ್ತು ಕ್ಯಾಡ್ಮಿಯಂ ಸಹ ವಿಷವಸ್ತುಗಳಾಗಿವೆ, 1956 ರಲ್ಲಿ ಜಪಾನನಲ್ಲಿ ಮಿನಮಾಟ” ರೋಗವು ಇಡೀ ಜಗತ್ತನ್ನೆ ನಡುಗಿಸಿತು. ಇದಕ್ಕೆ ಕಾರಣ ಕಾರ್ಖಾನೆಯಿಂದ ವಿಸರ್ಜಿಸಲ್ಪಟ್ಟ ಅತ್ಯಂತ ವಿಷಯುಕ್ತ ಪದಾರ್ಥ “ಮಿಥೈಲ್ ಮಕ್ರ್ಯೂರಿ. ಅದೇರೀತಿ ಕ್ರೋಮಿಯಂ ಮತ್ತು ಬ್ರೊಮಿನೇಟೆಡ್ ಕಾಂಪೊಂಡ್‍ಗಳು ಸಹ ಇರುತ್ತದೆ. ಅಲ್ಲದೆ ಈ ಎಲೆಕ್ಟ್ರಾನಿಕ್ಸ್ ಹಾಗೂ ವಿದ್ಯುನ್ಮಾನ ಉಪಕರಣಗಳಲ್ಲಿ ಉಪಯೋಗಿಸುವ ಪ್ಲಾಸ್ಟಿಕ್‍ಗಳನ್ನು ಅವೈಜ್ಞಾನಿಕವಾಗಿ ಸುಟ್ಟಾಗ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಡೈ ಆಕ್ಸ್‍ನ್ ಮತ್ತು ಫ್ಯೂರಾನ್ಸ್‍ಗಳು ವಾತವರಣಕ್ಕೆ ಸೇರಲ್ಪಡುತ್ತವೆ. ಇದರಿಂದಾಗಿ ಸುತ್ತಮುತ್ತ ಇರುವ ಜನಗಳಿಗೆ ಅನಾರೋಗ್ಯ ಉಂಟಾಗುತ್ತದೆ. ಈ ಎಲೆಕ್ಟ್ರಾನಿಕ್ಸ್ ಹಾಗೂ ವಿದ್ಯುನ್ಮಾನ ಉಪಕರಣಗಳನ್ನು ಅವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿದರೆ ಅಲ್ಲಿಯ ಕೆಲಸಗಾರರು ಈ ವಿಷವಸ್ತುಗಳನ್ನು ಸೇವಿಸಿ ಹೆಚ್ಚಿನ ಆನಾರೋಗ್ಯಕ್ಕೆ ತುತ್ತಾಗುತ್ತಾರೆ. ಹಾಗೂ ಈ ವಿಷಕಾರಿ ವಸ್ತುಗಳು ಸುತ್ತಮುತ್ತಲಿನ ವಾತಾವರಣದ ಮೇಲೆ ದುಷ್ಪÀರಿಣಾಮವನ್ನು ಬೀರುತ್ತದೆ.



ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸುಮಾರು 449 ಕಾರ್ಖಾನೆಗಳಿಗೆ ಇ-ತ್ಯಾಜ್ಯದ ಪರವಾನಿಗೆಯನ್ನು ನೀಡಿದೆ. ಇವುಗಳಲ್ಲಿ 231 ಸಾಫ್ಟವೇರ್ ಸಂಸ್ಥೆಗಳಾಗಿವೆ. ಇವುಗಳಿಂದ ಒಟ್ಟು ವರ್ಷಕ್ಕೆ 76,000 ಟನ್ ಇ-ತ್ಯಾಜ್ಯವು ಉತ್ಪತ್ತಿಯಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಮಂಡಳಿಯು 17 ಕಾರ್ಖಾನೆಗಳಿಗೆ ಇ-ತ್ಯಾಜ್ಯ ಸಂಸ್ಕರಣೆ ಮಾಡಲು ಪರವಾನಿಗೆ ನೀಡಿದೆ. ಈ ಕಾರ್ಖಾನೆಗಳು ಈಗಾಗಲೇ ಕಾರ್ಯಾರಂಭಿಸಿವೆ. ಇದಲ್ಲದೆ ಮಂಡಳಿಯು 20 ಹೊಸ ಸಂಸ್ಥೆಗಳಿಗೆ ಸಹ ನೀರಾಕ್ಷೇಪಣ ಸಮ್ಮತಿಯನ್ನು ನೀಡಿದೆ. ಈ ಕಾರ್ಖಾನೆಗಳು ಇನ್ನು ಕಾರ್ಯಾರಂಭ ಮಾಡಬೇಕಾಗಿದೆ.


ಇ-ತ್ಯಾಜ್ಯ ಕಾರ್ಖಾನೆಗಳಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ವಿದ್ಯುನ್ಮಾನ ಉಪಕರಣಗಳಿಂದ ಲೋಹ ಮತ್ತು ಅಲೋಹಗಳನ್ನು ಬೇರ್ಪಡಿಸಿ ಅವುಗಳನ್ನು ಮರುಬಳಕೆ ಮಾಡಲಾಗುತ್ತದೆ. ಇ-ತ್ಯಾಜ್ಯದಲ್ಲಿ ಕಬ್ಬಿಣ, ಪ್ರತಿಶತ 50%, ಪ್ಲಾಸ್ಟಿಕ್-21%, ಅಲೋಹಗಳು-13% ಇರುತ್ತದೆ. ಇದಲ್ಲದೇ ಅಮೂಲ್ಯ ಲೋಹಗಳಾದ ಚಿನ್ನ, ಬೆಳ್ಳಿ, ಪ್ಲಾಟಿನಂಗಳು ಸಹ ಇರುತ್ತವೆÉ. ಇವುಗಳನ್ನು ವೈಜ್ಞಾನಿಕವಾಗಿ ಬೇರ್ಪಡಿಸಬಹುದಾಗಿದೆ. ಕಬ್ಬಿಣ ಹಾಗೂ ಪ್ಲಾಸ್ಟಿಕ್‍ಗಳನ್ನು ಮರುಬಳಕೆ ಮಾಡಬಹುದಾಗಿದೆ ಕೆಲವು ಉಪಯುಕ್ತ ಕಾಂಪೋನೆಂಟ್‍ಗಳನ್ನು ಸಹ ಬೇರೆ ಎಲೆಕ್ಟ್ರಾನಿಕ್ಸ್ ಹಾಗೂ ವಿದ್ಯುನ್ಮಾನ ಉಪಕರಣಗಳನ್ನು ದುರಸ್ಥಿ ಮಾಡಲು ಬಳಸÀಬಹುದಾಗಿದೆ. ಪ್ರಿಂಟ್‍ಡ್ ಸರ್ಕ್ಯೂಟ್ ಬೋರ್ಡಗಳಿಂದ ತಾಮ್ರವನ್ನು ಹೊರತೆಗೆದು ಪುನರ್ಬಳಕೆ ಮಾಡಲಾಗುತ್ತದೆ.

ಬೆಂಗಳೂರಿನಲ್ಲಿ ಕೆಲವು ಕಾರ್ಖಾನೆಗಳು ಎಲೆಕ್ಟ್ರಾನಿಕ್ಸ್ ಹಾಗೂ ವಿದ್ಯುನ್ಮಾನ ಉಪಕರಣ ಭಾಗಗಳನ್ನು ವಿಂಗಡಿಸಿ ಅದರಲ್ಲಿನ ಆಯ್ದ ಭಾಗಗಳನ್ನು ಬೆಲ್ಜಿಯಂ ಕಾರ್ಖಾನೆಗೆ ಕಳುಹಿಸಿಕೊಡಲಾಗುತ್ತಿದೆ. ಈ ಕಾರ್ಖಾನೆಯಲ್ಲಿ ಸುಮಾರು 16 ವಿವಿಧ ಲೋಹಗಳನ್ನು ಇ-ತ್ಯಾಜ್ಯದಿಂದ ಉತ್ಪಾದನೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಬರಿ ಚಿನ್ನ ಹಾಗೂ ತಾಮ್ರವನ್ನು ಮಾತ್ರ ಬೇರ್ಪಡಿಸಲಾಗುತ್ತಿದೆ.

ಸರ್ಕಾರ ಜಾರಿಗೆ ತಂದಿರುವ ಇ-ತ್ಯಾಜ್ಯದ ಹೊಸ ನಿಯಮವು ಎಲ್ಲಾ ಎಲೆಕ್ಟ್ರಾನಿಕ್ಸ್ ಹಾಗೂ ವಿದ್ಯುನ್ಮಾನ ಉಪಕರಣಗಳ ಉತ್ಪಾದಕರು, ಬಳಕೆದಾರರು, ಖರೀದಿದಾರರು ಹಾಗೂ ಮರುಬಳಕೆದಾರÀರಿಗೆ ಅನ್ವಯಿಸುತ್ತದೆ. ಈ ನಿಯಮದಡಿ ಎಲ್ಲಾ ಉತ್ಪಾದಕರು, ಎಲೆಕ್ಟ್ರಾನಿಕ್ಸ್ ಹಾಗೂ ವಿದ್ಯುನ್ಮಾನ ಉಪಕರಣಗಳ ಸಂಗ್ರಹದಾರರು, ಬಳಕೆದಾರರು, ವಿಂಗಡಣೆದಾರÀರು ಮತ್ತು ಮರುಬಳಕೆ ಮಾಡುವವರಿಗೂ ಜವಾಬ್ದಾರಿಯನ್ನು ಹೊರಿಸಲಾಗಿದೆ.

ನಿಯಮ 9ರ ಪ್ರಕಾರ, ಎಲ್ಲಾ ಸಂಸ್ಥೆಗಳು ನಿಯಮ ಜಾರಿಗೊಂಡ ಮೂರು ತಿಂಗಳ ಒಳಗಾಗಿ ಮಂಡಳಿಯಿಂದ ಪರವಾನಿಗೆಯನ್ನು ಪಡೆಯಬೇಕಾಗಿದೆ. ಈ ಪರವಾನಿಗೆಯನ್ನು ಮಂಡಳಿಯು 5 ವರ್ಷದವರೆಗೂ ನೀಡಬಹುದಾಗಿದೆ. ನಿಯಮ 11ರ ಪ್ರಕಾರ, ಇ-ತ್ಯಾಜ್ಯದ ವಿಂಗಡಣೆದಾರರು ಮತ್ತು ಮರುಬಳಕೆದಾರರು ಮಂಡಳಿಯಿಂದ ರಿಜಿಸ್ಟ್ರೇಶನ್ ಪಡೆಯಬೇಕಾಗಿರುತ್ತದೆ. ರಿಜಿಸ್ಟ್ರೇಶನ್‍ನ್ನು ಪ್ರಥಮವಾಗಿ 2 ವರ್ಷದವರೆಗೆ, ನಂತರದಲ್ಲಿ 5 ವರ್ಷದವರೆಗೆ ನೀಡಲಾಗುತ್ತದೆ. ನಿಯಮ 12ರ ಪ್ರಕಾರ ಸಂಗ್ರಹಿಸಿದ ಇ-ತ್ಯಾಜ್ಯವನ್ನು 180 ದಿನಗಳಗಿಂತ ಮೇಲ್ಪಟ್ಟು ದಾಸ್ತಾನು ಇರಿಸಿಕೊಳ್ಳಬಾರದು. ನಿಯಮ 13ರ ಪ್ರಕಾರ, ಉಪಕರಣಗಳ ಉತ್ಪಾದಕರು, ಎಲೆಕ್ಟ್ರಾನಿಕ್ಸ್ ಹಾಗೂ ವಿದ್ಯುನ್ಮಾನ ಉಪಕರಣಗಳಲ್ಲಿ ಅಪಾಯಕಾರಿ ವಸ್ತುಗಳು ಇರದಂತೆ ಅಥವಾ ತುಂಬಾ ಕಡಿಮೆ ಮಟ್ಟದಲ್ಲಿ ಇರುವಂತೆ ಎಚ್ಚರವಹಿಸಬೇಕಾಗುತ್ತದೆÉ. ಈ ನಿಯಮಗಳ ಯಾವುದೇ ಸೆಕ್ಷನ್‍ಗಳು ಉಲ್ಲಂಘನೆಯಾದಲ್ಲಿ ಮಂಡಳಿಯು ಪರಿಸರ (ಸಂರಕ್ಷಣೆ) ನಿಯಮ 1986ರ ಅಡಿಯಲ್ಲಿ ಕಾನೂನಿನ ಕ್ರಮ ಜರುಗಿಸುವುದು.

(ಲೇಖಕರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದ ಸಮಯದಲ್ಲಿ (2012) ಬರೆದ ಲೇಖನ. ಈಗ ಅಂಕಿ ಅಂಶಗಳು ಹೆಚ್ಚಾಗಿರಬಹುದು)

-ಅ.ನಾ.ಪ್ರಹ್ಲಾದರಾವ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.