ವಿಷಯಕ್ಕೆ ಹೋಗಿ

ಕಂಡವರು ಯಾರು?


ಅದೂ ಬೇಸಗೆ ಕಾಲ. ತಂಪಾದ ಗಾಳಿಯ ಆಸ್ವಾದಿಸಲು ಹಸಿರ ಸೊಬಗಿನ ಕಬ್ಬನ್ ಪಾರ್ಕ್‌ನಲ್ಲಿ ಕೂತು ವಿಶ್ರಾಂತಿಸುತ್ತಿದ್ದೆ.  ಮರಗಳ ನಡುವೆ ನುಸುಳುತ್ತಿದ್ದ ಕಿರಣಗಳು ಶೋಭಿಸುತ್ತಿತ್ತು. ಅಲ್ಲಿ ದೂರದಲ್ಲಿ ಒಂದು ಮೈನಾ ಹಕ್ಕಿಯನ್ನು ಕಂಡೆ
. ಅದರ ಚುರುಕು ಹೇಳಬೇಕೆ? ಅತ್ತಿಂದಿತ್ತ, ಇತ್ತಿಂದಿತ್ತ ನಡೆಯುತ್ತ ತನ್ನ ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿತ್ತು. ನನ್ನ ಹತ್ತಿರದಲ್ಲೇ ಅದು ಸಾಗಿ ಬಂತು. ಅದರ ಕಣ್ಣ ಸಂಚಿಗೆ ಬಲಿಯಾಗಿದ್ದು ಒಂದು ಸುಂದರ ಬಣ್ಣದ ಚಿಟ್ಟೆ. ಆ ಚಿಟ್ಟೆಯ ಚೆಲುವಾದ ವರ್ಣಕ್ಕೆ ಎಲ್ಲರೂ ಮನಸೋಲಲೇಬೇಕು. ಆದರೆ ಆ ಹಕ್ಕಿಗೆ ಚಿಟ್ಟೆಯನ್ನು ನೋಡಿ ಮನಸೋಲುವ ಗುಣವೇನು ಇಲ್ಲ, ಆ ಗುಣವನ್ನೇನಾದರೂ ಬೆಳೆಸಿಕೊಂಡರೆ ಅದು ಪ್ರಕೃತಿ ಧರ್ಮಕ್ಕೆ ವಿರುದ್ಧವು ಸಹ.
         ಚಿಟ್ಟೆ ಮೈನಾ ಬಾಯಿಗೆ ಸಿಕ್ಕಿದ್ದು ಹೇಳುತ್ತಿದ್ದೆನಲ್ಲ, ಹಕ್ಕಿಯ ಬಾಯಿಗೆ ಚಿಟ್ಟೆಯ ಒಂದು ರೆಕ್ಕೆಯಷ್ಟೆ ಸಿಕ್ಕಿದ್ದು. ಇನ್ನೊಂದು ರೆಕ್ಕೆಯನ್ನು ಪಟಪಟನೆ ಬಡಿಯುತ್ತಿತ್ತು. ಮೈನಾ ಹಕ್ಕಿಯ ನಿರ್ಲ್ಯಕ್ಷವೋ, ಚಿಟ್ಟೆಯ ಬದುಕುವ ಹಂಬಲವೋ; ಹಕ್ಕಿಯ ಬಾಯಿಂದ ತಪ್ಪಿಸಿಕೊಂಡು, ಹೋರಾಟದಲ್ಲಿ ಗೆದ್ದ ಸೈನಿಕನಂತೆ ಚಿಟ್ಟೆ ಹಾರಿಹೋಯಿತು. ಹಕ್ಕಿಗೋ, ಬಾಯಿಗೆ ಬಂದ ತುತ್ತು ಹೊಟ್ಟೆಗೆ ಸೇರದಾಯಿತು. ಕೆಲ ಕ್ಷಣವು ಮೈನಾ ಕಂಗೆಟ್ಟು ನಿಂತ ಪ್ರಸಂಗ ವಿಷಾದನೀಯವಾಗಿತ್ತು. ತನ್ನ ಆಹಾರ ಹುಡುಕುತ್ತ ಮುಂದೆ ಸಾಗಿತು ಆ ಮೈನಾ..
ಇಲ್ಲಿ ನಾನು ಹೇಳ ಹೊರಟಿದ್ದು ಏನೆಂದರೆ, ಹಲವು ಬಾರಿ ಪ್ರಕೃತಿ ಧರ್ಮಕ್ಕೆ ವಿರುದ್ಧವಾಗಿ ಕೆಲವು ಘಟನೆಗಳು ಜರಗುತ್ತವೆ. ಅದು ಸಹ ಪ್ರಕೃತಿಯ ಧರ್ಮವೇ ಎಂದು ತಿಳಿಯಬೇಕದ್ದದ್ದು ನಮ್ಮ ಜ್ಞಾನ. ಮೈನಾ ಹಕ್ಕಿಯ ಬಾಯಿಗೆ ಚಿಟ್ಟೆ ಬಲಿಯಾಗಿದ್ದರೆ ಅದು ಪ್ರಕೃತಿಯ ಧರ್ಮ ಎಂದು ಹೇಳುವ ಮನುಜರು‌‌, ಅದೇ ಚಿಟ್ಟೆ ಬದುಕುಳಿದಾಗ ಆ ಚಿಟ್ಟೆಯ ಪುಣ್ಯ, ಪೂರ್ವಜನ್ಮದ ಫಲ ಹೀಗೆ ಹಲವಾರು ಮಾತುಗಳನ್ನು ಸೃಷ್ಟಿಸುತ್ತಾರೆ. ಇಂತಹ ಘಟನೆಗಳು ನಮ್ಮಂತಹ ನರ ಮನುಷ್ಯರ ಬಾಳಲ್ಲಿ ಅತ್ಯಾಧಿಕವಾಗಿ ಜರುಗುತ್ತಲೆ ಇರುತ್ತದೆ. ಆ ಚಿಟ್ಟೆ ಕೆಲವು ಕ್ಷಣದಲ್ಲೆ ಇನ್ನೊಂದು ಹಕ್ಕಿಯ ಬಾಯಿಗೆ ಬಲಿಯಾಗಬಹುದು, ಅದನ್ನು ಕಾಣುವವರ್ಯಾರು?
ಸೋಲು-ಗೆಲವು ಸಾಮಾನ್ಯ ಸಂಗತಿ. ಒಬ್ಬ ತನ್ನ ತನು ಬಲದಿಂದ ಗೆದ್ದರೆ, ಮತ್ತೊಬ್ಬ ತನ್ನ ಬುದ್ಧಿವಂತಿಕೆಯಿಂದ ಗೆಲ್ಲುತ್ತಾನೆ. ಸೋತವ ನಿರ್ಭಾಗ್ಯನು ಅಲ್ಲ, ನಿತ್ರಾಣಿತನು ಅಲ್ಲ. ಆ ಸಂದರ್ಭಕ್ಕೆ ಅವನಿಗೆ ತನ್ನ ಬಲ, ಬುದ್ಧಿಶಕ್ತಿ ತೋರಲು ಆಗದಿರಬಹುದು ಅಥವ ಅವನ ಎದುರಾಳಿ ಅವನಿಗಿಂತ ಬಲಾಢ್ಯ, ಜಾಣನಾಗಿರಬಹುದು. ಸೋಲು ಕಂಡಿತ ತವುದಲೆಯಲ್ಲ, ಸೋಲು ಗೆಲುವಿನ ತಳಪಾಯವೆನ್ನಬಹುದು.
ಇಂತಹ ಸೋತ ಜನರು ತಮ್ಮಲ್ಲಿ ಶಕ್ತಿ ಕುಂದಿದೆಯೆಂದೊ, ಗ್ರಹಚಾರ ಸರಿಯಿಲ್ಲವೆಂದೊ, ಪೀಡೆ, ಪಿಶಾಚಿ, ದೆವ್ವ ಹೀಗೆ ತಮ್ಮ ಅಜ್ಞಾನದಿಂದ ಒಬ್ಬರ ಅಧೀನರಾಗಲು ಇಚ್ಛಿಸುತ್ತಾರೆ. ಇಂತಹ ಸನ್ನಿವೇಶ, ಜನಗಳನ್ನು ಉಪಯೋಗಿಸಿಕೊಂಡು ಅನೇಕ ಕಳ್ಳ ಸ್ವಾಮಿಗಳು ಹುಟ್ಟುತ್ತಾರೆ.
ರಕ್ತಬೀಜಾಸುರ ಎಂಬ ರಾಕ್ಷಸನ ಹನಿ ಹನಿ ರಕ್ತ ಭೂಮಿಗೆ ಬಿದ್ದಾಗಲೂ ಅನೇಕ ಸಂಖ್ಯೆಯಲ್ಲಿ ರಾಕ್ಷಸರು ಉತ್ಪತ್ತಿ ಆಗುತ್ತಿದ್ದ ಕಥೆಯಂತೆ, ಪ್ರತಿಯೊಬ್ಬನ ಅಜ್ಞಾನದಿಂದ ಮೋಸದ ಕಾವಿಗಳು ಹುಟ್ಟುತ್ತದೆ.
ಗ್ರಹಚಾರ, ಕರ್ಮಫಲ, ನಕ್ಷತ್ರದೋಷ ಏನೇ ಇರಲಿ ಅದು ಧರ್ಮದ ಚೌಕಟ್ಟಿನಲ್ಲಿ ಇದ್ದರೆ ಧರ್ಮವು ಸುರಕ್ಷಿತವಾಗಿರುತ್ತದೆ. ಆದರೆ ಅದು ಮೂಢನಂಬಿಕೆಯ ಹಾದಿ ತುಳಿದು, ದುಷ್ಟರ ಕೈಯಿಗೆ ಸಿಕ್ಕರೆ ಧರ್ಮವು ಸೊರಗುವುದಲ್ಲದೆ, ನಕಾರಾತ್ಮಕ ಪ್ರಾಬಲ್ಯ ಪ್ರಜ್ವಲವಾಗುತ್ತದೆ.
ಧರ್ಮಕ್ಕೆ ತನ್ನದೇ ಆದ ನಿಲುವು, ನಿರ್ಬಂಧ, ನಿಶ್ಚತತೆ ಎಲ್ಲವೂ ಹಿಂದಿನಿಂದಲೂ ಇದೆ. ಅದನ್ನು ಸರಿಯಾದ ರೀತಿಯಲ್ಲಿ ಅರಿಯದ ಮನುಜ ತನ್ನ ಎಲ್ಲ ಕೆಡಕಿಗೂ ಕರ್ಮ ಎಂಬ ಪದವನ್ನಿಡಿದು ಅಧರ್ಮದ ದಾರಿಯಲ್ಲಿ ಸಾಗುತ್ತಾನೆ. ಆ ದಾರಿ ಧರ್ಮದಿಂದ ಅಧರ್ಮದೆಡೆಗೆ ಸಾಗುತ್ತಿದೆ ಎನ್ನುವುದು ಕರ್ಮ ಎಂಬ ಪದದ ಅಂಧಕಾರದಲ್ಲಿ ಕಾಣದಾಗುತ್ತದೆ. ಈ ಕಾರಣದಿಂದಾಗಿಯೇ ಧರ್ಮ ಸೊರಗುತ್ತಿದೆ ಎಂಬ ಚರ್ಚೆ ಅಧಿಕವಾಗಿ ಕೇಳಲ್ಪಟ್ಟಿರುವುದು.
ಮೈನಾ ಮತ್ತು ಚಿಟ್ಟೆಯ ಕಥೆಗೆ ಬರೋಣ. ಹಿರಿದಾದ ಮೈನಾ ಗೆಲ್ಲಬೇಕಾಗಿದ್ದರು, ಚಿಟ್ಟೆ ಗೆದ್ದಿತು. ಕಿರಿದಾದ ಚಿಟ್ಟೆ ಸೋಲಬೇಕಾಗಿದ್ದರು, ಮೈನಾ ಸೋತಿತು. ಚಿಟ್ಟೆ ಮೈನಾ ಬಾಯಿಗೆ ಆ ಕ್ಷಣದಲ್ಲೆ ಸಿಕ್ಕು, ಮೈನಾ ಆಹಾರವಾಗಬೇಕಾದದ್ದು ಪ್ರಕೃತಿ ಧರ್ಮ ಎಂದು ಪರಿಗಣಿಸಿದರು ಕಂಡಿತ ಅದು ಮೈನಾ ಕರ್ಮವೊ ಚಿಟ್ಟೆಯ ಕರ್ಮವೊ ಅಲ್ಲ.
ಹಿಡಿದ ಚಿಟ್ಟೆಯ ಬಿಡಬಾರದು ಎಂಬುದು ಹಕ್ಕಿಯ ನಿಲುವು, ಹಕ್ಕಿಯ ಬಾಯಿಗೆ ಸಿಕ್ಕಾಗ ಬಚಾವು ಆಗಬೇಕೆಂಬುದು ಚಿಟ್ಟೆಯ ನಿಲುವು. ಅವರವರ ನಿಲುವುಗಳಲ್ಲಿ ಯಾರು ಹೆಚ್ಚು ಶ್ರಮವಹಿಸುತ್ತಾರೋ ಅವರ ನಿಲುವಿಗೆ ಗೆಲುವು. ಹಾಗಾಗಿ ಇಲ್ಲಿ ಧರ್ಮ-ಕರ್ಮಕ್ಕಿಂತ ಶ್ರಮ ಮುಖ್ಯವಾಗುತ್ತದೆ. ಮೈನಾದಿಂದ ಗೆದ್ದ ಮಾತ್ರಕ್ಕೆ ಆ ಚಿಟ್ಟೆ ಬಲಶಾಲಿಯಲ್ಲ, ಸಣ್ಣ ಚಿಟ್ಟೆಯಿಂದ ಸೋತ ಆ ಮೈನಾ ಅಶಕ್ತವೂ ಅಲ್ಲ. ಆ ಕ್ಷಣದ ಹೋರಟದಲ್ಲಿ ಯಾರು ಬುದ್ಧಿವಂತಿಕೆ ತೋರುವರೋ, ಸಿಕ್ಕ ಅವಕಾಶ ಸರಿಯಾದ ರೀತಿಯಲ್ಲಿ ಪ್ರಯೋಗಿಸುವರೋ ಅವರಿಗೆ ಗೆಲುವು ಸಿಗುತ್ತದೆ.
ಅಷ್ಟರಲ್ಲಿ ನಾನು ಕೂತೆಡೆಗೆ ಒಬ್ಬಾತ ಬಂದ,
’ಭವಿಷ್ಯ’ ಕೇಳಿಯೆಂತೆಂದ.
’ಬೇಡ’ವೆಂತೆಂದೆ.
"ಕೇಳಿ ಸಾರ್, ನಿಮ್ಮ ಕರ್ಮಫಲದ ಬಗ್ಗೆ ಹೇಳ್ತೀನಿ, ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಹೇಳ್ತೀನಿ, ನಿಮ್ಮ ಉದ್ಯೋಗ, ಜೀವನದ ಬಗ್ಗೆ ಹೇಳ್ತೀನಿ" ಎಂದು ಪುನಹ ಉಚ್ಛರಿಸಿದ.
"ನನ್ನ ಭವಿಷ್ಯ ನಾನೇ ರೂಪಿಸಿಕೊಳ್ಳತ್ತೀನಿ, ಹೋಗಪ್ಪ ಮುಂದೆ" ಎಂದು ನಾನು ಎದ್ದು ಹೊರಟೆ.
ಆ ಹಕ್ಕಿಗೆ ಯಾವ ಹೊಸ ಚಿಟ್ಟೆ ಸಿಕ್ಕಿತೋ? ಆ ಚಿಟ್ಟೆ ಯಾವ ಹೊಸ ಹಕ್ಕಿಯ ಬಾಯಿಗೆ ಸೇರಿತೋ? ಕಂಡವರು ಯಾರು?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.