ವಿಷಯಕ್ಕೆ ಹೋಗಿ

ದಾಟಬೇಕು, ದಾಟಿ ಬದುಕಬೇಕು..........


ಒಂದು ದಿನ ನಾನು ಆಫೀಸಿನಿಂದ ಕೆಲಸ ಮುಗಿಸಿಕೊಂಡು ಮನೆಗೆ ಸೈಕಲಿನಲ್ಲಿ ಬರುತ್ತಿದ್ದೆ. ನಮ್ಮ ಮನೆಯ ಸಮೀಪವಿರುವ ಗೌಡನ ಕೆರೆಯ ಬಳಿ ಬರುವಾಗ ನನಗೆ ಸಣ್ಣ ಹಾವೊಂದು ರಸ್ತೆ ದಾಟುತ್ತಿದ್ದದ್ದು ಕಂಡುಬಂತು. ಕೆಲವೇ ಕ್ಷಣಗಳಷ್ಟೆ,
ಆ ಕಡೆಯಿಂದ ರಭಸವಾಗಿ ಬರುತ್ತಿದ್ದ ಕಾರೊಂದು ಆ ಹಾವಿನ ಮೇಲೆ ಹಾದುಹೋಯಿತು. ತಕ್ಷಣವೆ ಹಾವು ನಿಶ್ಚಲವಾಯಿತು. ನಾನು ಏನಾಗಿರಬಹುದೆಂದು ಹತ್ತಿರ ಹೋಗಿ ನೋಡಿದೆ. ಹಾವು ಕುಟುಕು ಜೀವವಾಗಿತ್ತು ಮತ್ತು ಒಂದೆರಡು ನಿಮಿಷಗಳಲ್ಲಿ ಪ್ರಾಣಬಿಟ್ಟಿತು.
ಅದು ಕೊಳಕುಮಂಡಲ! ಆ ಜಾತಿಯ ಹಾವನ್ನು ನೈಸರ್ಗಿಕವಾಗಿ ಅದೇ ಮೊದಲ ಬಾರಿ ನಾನು ನೋಡಿದ್ದು. ನಮ್ಮ ಮನೆಯ ಬಳಿ ನಾಗರ, ಕೇರೆ ಹಾವನ್ನು ಮಾತ್ರ ನೋಡಿದ್ದ ನನಗೆ, ಆಶ್ಚರ್ಯ ಅದರ ಹಿಂದೆ ದುಃಖವು ಆಯಿತು.
          ಇನ್ನೊಂದು ಘಟನೆ ನೆನಪಿಗೆ ಬರುತ್ತಿದೆ. ನಾವು (ಗೌತಮ, ಶ್ರೀಕಾಂತ, ಕೇಶವ) ೨೦೧೧ರ ಮಾರ್ಚ್ ತಿಂಗಳಿನಲ್ಲಿ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಿದ್ದೆವು. ಮರಳಿ ಬರುತ್ತಿರಬೇಕಾದರೆ ಕೊಳ್ಳೆಗಾಲದ ನಂತರ ಒಂದು ಹಳ್ಳಿಯ ಬಳಿ ಇದ್ದಕ್ಕಿದ್ದಂತೆ ಎರಡು ಮುಂಗುಸಿಗಳು, ರಸ್ತೆಯ ಅಂಚಿನಲ್ಲಿ ಕಾಣಿಸಿದವು. ರಸ್ತೆ ದಾಟಲು ಹವಣಿಸುತ್ತಿದ್ದ ಅವು ನಮ್ಮ ಕಾರನ್ನು ಕಂಡವು. ಒಂದು ಮುಂಗುಸಿಯೇನೊ ಅಲ್ಲೆ ನಿಂತು ಬಿಟ್ಟಿತು ಆದರೆ ಇನ್ನೊಂದು ರಸ್ತೆಯ ಮೇಲೆ ಓಡಲಾರಂಭಿಸಿತು. ಸಕಾಲದಲ್ಲಿ ವಾಹನವನ್ನು ಗೌತಮ ನಿಧಾನಗೊಳಿಸಿದ್ದರಿಂದ, ಆ ಮುಂಗುಸಿಯ ಜೀವ ಅಂದು ಉಳಿಯಿತು.
          ಇತ್ತೀಚಿನ ದಿನಗಳಲ್ಲಿ ವನ್ಯಪ್ರಾಣಿಗಳಿಗೆ ರಸ್ತೆ ದಾಟುವುದಕ್ಕಿಂತ ಹೆಚ್ಚಿನ ತ್ರಾಸದಾಯಕ ಕೆಲಸ ಇನ್ನೊಂದಿಲ್ಲ. ರಸ್ತೆಯನ್ನು ದಾಟ ಹೊರಟರೆ, ಇನ್ನೊಂದು ಬದಿಯನ್ನು ತಲುಪುವುದರೊಳಗೆ ಇಹಲೋಕವನ್ನು ತ್ಯಜಿಸಿರಬೇಕಾಗುತ್ತದೆ. ಇದಕ್ಕೆ ಕಾರಣ ಹೆಚ್ಚಿದ ವಾಹನ ಸಂಚಾರ ದಟ್ಟಣೆ.
          ಕಳೆದ ಒಂದೆರಡು ದಶಕದಲ್ಲಿ, ನಮ್ಮ ಜನಸಂಖ್ಯೆ ವಿಪರೀತ ಹೆಚ್ಚಿದೆ. ಮನುಷ್ಯನ ಆಧುನಿಕ ಜೀವನಶೈಲಿ ಅಗತ್ಯಕ್ಕಿಂತ ಹೆಚ್ಚಿನ ಬೇಡಿಕೆಯನ್ನು ಕೇಳುತ್ತದೆ. ಮಹಾನಗರಗಳು ವಿಸ್ತರಿಸಿದಂತೆಲ್ಲ, ಪರಿಸರ ದೂರ ಹೋಗಿ, ಪರಿಸರದ ವಸ್ತುಗಳು ದೂರದ ಪ್ರದೇಶಗಳಿಂದ ಪೂರೈಕೆಯಾಗುತ್ತದೆ (ಆಹಾರ, ನೀರು ಮುಂತಾದವು). ಅಲ್ಲದೆ ನಗರವಾಸಿಗಳು ವೀಕೆಂಡ್ ಗಳಂದು ತಮ್ಮ ಊರುಗಳಿಗೆ ಅಥವಾ ಬೇಸರ ಕಳೆಯಲು ಎಲ್ಲಾದರು ಹೋಗಲೇಬೇಕು. ಇದೆಲ್ಲದರ ದುಷ್ಪರಿಣಾಮ ವನ್ಯಜೀವಿಗಳ ಮೇಲಾಗುತ್ತಿದೆ. 
          ನಮ್ಮ ರಕ್ಷಿತಾರಣ್ಯಗಳು ಇದರಿಂದ ಹೊರತಾಗಿಲ್ಲ. ಅನೇಕ ರಾಷ್ಟ್ರೀಯ ಹೆದ್ದಾರಿಗಳು ರಕ್ಷಿತಾರಣ್ಯಗಳ ಮೂಲಕವೆ ಹೋಗುವುದು. ಇಲ್ಲಿ ದಿನದ ೨೪ ಗಂಟೆಯು ವಾಹನ ಸಂಚಾರವಿರುತ್ತದೆ. ಒಂದು ಸಮೀಕ್ಷೆಯ ಪ್ರಕಾರ, ಬಂಡೀಪುರದಲ್ಲಿ ಪರ್ವ ಕಾಲದಲ್ಲಿ (Peak hours) ಪ್ರತಿ ಹತ್ತು ಸೆಕೆಂಡಿಗೊಂದು ವಾಹನ ಚಲಿಸುತ್ತಿತ್ತು. ವಾಹನ ದಟ್ಟಣೆ ಎಷ್ಟಿರ ಬಹುದೆಂದು ಊಹಿಸಿಕೊಳ್ಳಿ. ಇದರಿಂದಾಗಿ ಹಲವಾರು ಬಗೆಯ ಪ್ರಾಣಿ ಪಕ್ಷಿಗಳು ಸಾವಿಗೀಡಾಗುತ್ತವೆ.
          ೨೦೦೯ರಲ್ಲಿ ಕರ್ನಾಟಕ ಸರ್ಕಾರ, ರಾತ್ರಿಯ ವೇಳೆ ಬಂಡೀಪುರದಲ್ಲಿ ವಾಹನ ಸಂಚಾರ ನಿಲ್ಲಿಸಿತು. ಇದರ ನಂತರ ನಡೆಸಿದ ಸಮೀಕ್ಷೆಯಲ್ಲಿ, ರಾತ್ರಿಯ ವೇಳೆ ಕಾಡು ಪ್ರಾಣಿಗಳು ರಸ್ತೆ ಬದಿಯಲ್ಲಿ ನಿರ್ಭಯವಾಗಿ ಓಡಾಡುತ್ತಿದ್ದದ್ದು ಕಂಡು ಬಂತು. ಹೀಗಾಗಿ ಕಾಡಿನಲ್ಲಿ ವಾಹನ ಸಂಚಾರ ತಡೆ ಅನಿವಾರ್ಯವಾಗಿದೆ. ಸ್ವಲ್ಪ ಬಳಸು ಮಾರ್ಗವಾದರು, ಅಗತ್ಯವಿದ್ದವರು, ಕಾಡಿನ ಹೊರಗಿರುವ ದಾರಿಯನ್ನು ಹಿಡಿಯುವುದು ಉತ್ತಮ. ಇದರಿಂದಾಗಿ ವನ್ಯಸಂಕುಲಕ್ಕೆ ಮಹೋಪಕಾರ ಮಾಡಿದಂತಾಗುತ್ತದೆ.
          ನಾವು ಸಹ ನಮ್ಮ ಸ್ವಂತ ವಾಹನದಲ್ಲಿ ಅನಗತ್ಯವಾಗಿ ಅಡ್ಡಾಡುವುದನ್ನು ಕಡಿಮೆಗೊಳಿಸಿದರೆ, ನಮ್ಮ ಅರಿವಿಗೆ ಬಾರದೆ ನಮ್ಮಿಂದ ಸಾಯಬಹುದಾದ ಅನೇಕ ವನ್ಯಪ್ರಾಣಿಗಳನ್ನು ಉಳಿಸಬಹುದು. ಇದು ನಮ್ಮಿಂದ ಸಾಧ್ಯವೆ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.